ಬಸವವೇಶ್ವರ ಜಯಂತಿ, ಅಕ್ಷಯ ತೃತೀಯ: ಕ್ರಾಂತಿ ಯೋಗಿ ಬಸವಣ್ಣನವರ ತತ್ವಗಳು ಅಕ್ಷಯವಾಗಲಿ

ವೈಶಾಖ ಮಾಸ ಪ್ರಾರಂಭವಾದೊಡನೆಯೇ ಈ ಮಾಸದಲ್ಲಿ ಭರತ ವರ್ಷ ಕಂಡ ಶ್ರೇಷ್ಠ ಸಂತರ ಜನ್ಮದಿನಾಚರಣಗಳೂ ನಡೆಯುತ್ತವೆ. ಗುರು ಪೂರ್ಣಿಮೆಗೂ ಮುನ್ನ ಶಂಕರ, ರಾಮಾನುಜ, ಬಸವೇಶ್ವರಂತಹ
ಬಸವಣ್ಣ
ಬಸವಣ್ಣ
ವೈಶಾಖ ಮಾಸ ಪ್ರಾರಂಭವಾದೊಡನೆಯೇ ಈ ಮಾಸದಲ್ಲಿ ಭರತ ವರ್ಷ ಕಂಡ ಶ್ರೇಷ್ಠ ಸಂತರ ಜನ್ಮದಿನಾಚರಣಗಳೂ ನಡೆಯುತ್ತವೆ. ಗುರು ಪೂರ್ಣಿಮೆಗೂ ಮುನ್ನ ಶಂಕರ, ರಾಮಾನುಜ, ಬಸವೇಶ್ವರಂತಹ ಸಂತ ಶ್ರೇಷ್ಠರ ಜನ್ಮದಿನವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ಅಂತೆಯೇ ಇಂದು ನಾಡಿನಾದ್ಯಂತ, ವೈಶಾಖ ಶುದ್ಧ ತದಿಗೆಯ ದಿನದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ.
ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ಮುಂದಾದ ಉದಾತ್ತ ತತ್ವಗಳನ್ನು ಭೋಧಿಸಿದ ಮಹಾನ್ ವ್ಯಕ್ತಿ, ಅಂದಿನ ಕಾಲಕ್ಕೆ ಒಂದು ದೇಶದ ಪ್ರಧಾನಿಯಾಗಿದ್ದುಕೊಂಡು ಪ್ರಜಾಪ್ರಭುತ್ವ, ಕಾಯಕಕ್ಕೆ ಪ್ರಧಾನ ಆಧ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ಗುರು. ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರ ಸೀಮಿತಗೊಳಿಸದೇ ಭಕ್ತಿ ಮತ್ತು ರಾಜತಂತ್ರವನ್ನು ಜೊತೆ ಜೊತೆಗೇ ನಡೆಸಲು ಪ್ರೇರಕ ಶಕ್ತಿಯಾದ ಮಾರ್ಗದರ್ಶಕ, ಚೈತನ್ಯವೂ ಹೌದು.
ಭಾರತೀಯ ಸನಾತನ ಧರ್ಮ ಹೇಳಿದ್ದ " ದೇಹೋ ದೇವಾಲಯ ಪ್ರೋಕ್ತೋ ಜೀವೋ ದೇವಃ ಸನಾತನಃ ತ್ಯಜೇತ್‌ ನಿರ್ಮಾಲ್ಯಂಸೋ ಅಹಂ ಭಾವೇನ ಪೂಜಯೇತ್‌" ಎಂಬ ಉದಾತ್ತ ಚಿಂತನೆಯನ್ನು ಬಸವಣ್ಣನವರು ಶರೀರವೇ ದೇವಸ್ಥಾನ, ಶಿರವೇ ಹೊನ್ನ ಕಲಶ ಎಂದು ಸಾಮಾನ್ಯರಿಗೂ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಹಾಗಾಗಿಯೇ ಅಂದಿನ ಭಕ್ತಿ ಭಂಡಾರಿ ಬಸವಣ್ಣವರ ಆಚಾರ-ವಿಚಾರ ಎಂದೆಂದಿಗೂ ಪ್ರಸ್ತುತವಾದ ತತ್ವಗಳು.
12 ನೆಯ ಶತಮಾನದ ಭಾರತೀಯ ಸ್ತ್ರೀ ಪ್ರಮುಕಹವಾಗಿ ಕರ್ನಾಟಕದ ಸ್ತ್ರೀಯರ ಇತಿಹಾಸದಲ್ಲಿ ಮಹತ್ತರ ಬದಲಾವಣೆಯಾದ ಕಾಲಘಟ್ಟ ಎಂದರೆ ಅದಕ್ಕೆ ಬಸವಯುಗದ ಕಲ್ಯಾಣ ಕ್ರಾಂತಿಯ ಪ್ರಭಾವ ಹೆಚ್ಚಾಗಿತ್ತು. ಸ್ತ್ರೀಯರಿಗೆ ಸಮಾನ ಸ್ಥಾನ ನೀಡಿ ಪುರುಷರೆತ್ತರಕ್ಕೆ ಏರುವಂತಹ ವಾತಾವರಣ ಕಲ್ಪಿಸಿದ ಬಸವಣ್ಣನವರನ್ನು “ಸ್ತ್ರೀ ಉದ್ಧಾರಕ” ರೆಂದು ಅನೇಕರು ಸ್ಮರಿಸುತ್ತಾರೆ.
ಬಸವಣ್ಣನವರು ಚಿಕ್ಕಂದಿನಿಂದಲೇ ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಘಟನೆಯಿಂದಲೇ ಕ್ರಾಂತಿಗೆ ಮುಂದಾಗುತ್ತಾರೆ. ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ, ಬಸವ “ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ” ಎಂದು ಅದನ್ನು ನಿರಾಕರಿಸಿ ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂತಹ ಆದರ್ಶ ಸಹೋದರ. ಅದರಂತೆ ಬಸವಣ್ಣ ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ “ಬಸವನಿಲ್ಲದ ಮನೆಯಲ್ಲಿ ನಾನೂ ಇರಲಾರೆ” ಅನ್ನುವಲ್ಲಿ ಸಹೋದರಿಯ ಪ್ರೀತಿ ಅನಿರ್ವಚನೀಯ. ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಕಾರ್ಯಗಳನ್ನು ಸ್ತ್ರೀಯರಿಗೆ ಮಾಡುವ ಅಧಿಕಾರ ವಿರಲಿಲ್ಲ. ಆದರೆ ಬಸವಣ್ಣನವರು ಲಿಂಗದೀಕ್ಷೆ, ವಿಭೂತಿಧಾರಣ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿಗಳಲ್ಲಿ ಸ್ತ್ರೀಯರೂ ಪುರುಷನಷ್ಟೇ ಅಧಿಕಾರವನ್ನು ಸ್ವೀಕರಿಸುವಂತಹ ವಾತಾವರಣ ನಿರ್ಮಾಣವಾಗಲು ಅಡಿಪಾಯ ಹಾಕಿಕೊಟ್ಟರು. 
ಪ್ರಧಾನಿಯಾಗಿದ್ದ ಬಸವಣ್ಣನವರಲ್ಲಿ ರಾಜಕಳೆ ಹಾಗೂ ಗುರು ಬಸವೇಶ್ವರರಲ್ಲಿ ಸಾತ್ವಿಕ ಕಳೆ ಎರಡನ್ನೂ ಕಾಣಬಹುದು ಇಂದು ಸಮಾಜದ ಆರೋಗ್ಯಕರ ಬಳವಣಿಗಗೆ ದುಡಿದ ಕಾಯಕ ಯೋಗಿ, ಕ್ರಾಂತಿ ಯೋಗಿ ಬಸವಣ್ಣನವರ ಜಯಂತಿ ಹಾಗೂ ಅಕ್ಷಯ ತೃತೀಯ ಅವರ ತತ್ವಗಳು ಸಾರ್ವಕಾಲಿಕವಾಗಿ ಅಕ್ಷಯವಾಗಲಿ ಎಂದು ಆಶಿಸೋಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com