ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ತಿಂಗಳ ಕಾರ್ಯಕ್ರಮ ಮನ್ ಕೀ ಬಾತ್ (Mann Ki Baat) ನಲ್ಲಿ ಅಪರೂಪದ ಸಾಧನೆ ಮಾಡಿದ, ಅಪರೂಪದ ವಿಷಯಗಳ ಬಗ್ಗೆ ಹೇಳಿ ಗಮನ ಸೆಳೆಯುವುದುಂಟು.
ಇಂದು ಮನ್ ಕಿ ಬಾತ್ ಸರಣಿಯ 107ನೇ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಾ ಹಲವು ವಿಚಾರಗಳ ಕುರಿತು ಮಾತನಾಡಿದ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ವರ್ಷಾ ಎಂಬ ಮಹಿಳೆಯ ಹೆಸರು ಪ್ರಸ್ತಾಪಿಸಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮವು ಹೇಗೆ ಜನರ ಜೀವನದಲ್ಲಿ ಬದಲಾವಣೆ ತರುತ್ತಿದೆ, ಜನ ಹೇಗೆ ಸ್ಫೂರ್ತಿಗೊಂಡು ಹಲವು ಕೆಲಸಗಳಲ್ಲಿ ತೊಡಗಿದ್ದಾರೆ ಎಂಬುದನ್ನು ತಿಳಿಸುವಾಗ ಮೋದಿ ಅವರು ವರ್ಷಾ ಅವರನ್ನು ಉದಾಹರಣೆಯಾಗಿ ನೀಡಿದರು.
ವರ್ಷಾ ಅವರ ಅಪರೂಪದ ಸಾಧನೆಯೇನು?:ಮನ್ ಕೀ ಬಾತ್ ಕಾರ್ಯಕ್ರಮವು ಹೇಗೆ ಸಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂಬುದಕ್ಕೆ ಕರ್ನಾಟಕದ ಚಾಮರಾಜನಗರದ ವರ್ಷಾ ಅವರೇ ಸಾಕ್ಷಿಯಾಗಿದ್ದಾರೆ. ವರ್ಷಾ ಅವರು ಮನ್ ಕೀ ಬಾತ್ ಕಾರ್ಯಕ್ರಮದ ಒಂದು ಎಪಿಸೋಡ್ನಿಂದ ಪ್ರೇರೇಪಣೆಗೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಬಾಳೆ ಹಣ್ಣಿನ ಸಿಪ್ಪೆಯಿಂದ ಜೈವಿಕ ಗೊಬ್ಬರ ತಯಾರಿಕೆ, ಸ್ಥಳೀಯ ಉತ್ಪನ್ನಗಳನ್ನು ಬಳಸಿ ಕರಕುಶಲ ವಸ್ತುಗಳನ್ನು ತಯಾರಿಸುವುದು ಸೇರಿ ಹಲವು ಚಟುವಟಿಕೆಗಳನ್ನು ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಬೇರೆಯವರಿಗೂ ಉದ್ಯೋಗ ನೀಡಿ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಯಾರೀಕೆ ವರ್ಷಾ: ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದವರಾದ ವರ್ಷಾ ಎಂಟೆಕ್ ಪದವೀಧರೆ. ಪ್ರಧಾನಿಯವರ ಮಾತುಗಳಿಂದ ಸ್ಫೂರ್ತಿ ಪಡೆದು ತಮ್ಮಲ್ಲಿನ ಕೌಶಲ್ಯ, ಪ್ರತಿಭೆ ಹಾಗೂ ವಿದ್ಯಾಭ್ಯಾಸಗಳಿಂದ ಇಂದು ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಬಾಳೆ ಹಣ್ಣಿನ ಸಿಪ್ಪೆಯಿಂದ ರಸಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಾರೆ. ಆಕೃತಿ ಎಕೋ ಫ್ರೆಂಡ್ಲಿ ಎಂಟರ್ಪ್ರೈಸಸ್ ಎಂಬ ಸಣ್ಣ ಕೈಗಾರಿಕೆಯಲ್ಲಿ ಸ್ಥಳೀಯ ವಸ್ತುಗಳನ್ನೇ ಬಳಸಿ ಕರಕುಶಲ ಉತ್ಪನ್ನಗಳನ್ನು ತಯಾರಿಸುತ್ತಾರೆ. ಈ ಮೂಲಕ ಹತ್ತಾರು ಜನರಿಗೆ ಉದ್ಯೋಗವನ್ನೂ ನೀಡಿದ್ದಾರೆ.
Advertisement