
ನವದೆಹಲಿ: ಐಪಿಎಲ್ ಆರನೇ ಆವೃತ್ತಿಯಲ್ಲಿನ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಸಮಿತಿ ಸಲ್ಲಿಸಿರುವ ತನಿಖಾ ವರದಿ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 14ಕ್ಕೆ ಮುಂದೂಡಿದೆ. ವರದಿಯ ಸಂಪೂರ್ಣ ಅಧ್ಯಯನ ಸಾಧ್ಯವಾಗಿಲ್ಲದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಐಪಿಎಸ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ಕುರಿತು ತನಿಖೆ ನಡೆಸಿದ್ದ ನ್ಯಾ. ಮುದ್ಸಲ್ ನೇತೃತ್ವದ ಸಮಿತಿ ನ. 4ರಂದು ಸುಪ್ರೀಂ ಕೋರ್ಟ್ಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದ ಸುಮಾರು 35 ಪುಟಗಳ ತನಿಖಾ ವರದಿಯ ವಿಚಾರಣೆ ಸೋಮವಾರ ಆರಂಭಗೊಳ್ಳಬೇಕಿತ್ತು. ಆದರೆ, ಅಧ್ಯಯನ ಇನ್ನೂ ಆಗಿಲ್ಲವಾದ್ದರಿಂದ ವಿಚಾರಣೆ ಮುಂದೂಡಲ್ಪಟ್ಟಿದೆ.
ಶ್ರೀನಿಗೆ ಹಿನ್ನಡೆ: ಸುಪ್ರೀಂ ಕೋರ್ಟ್ ಈ ನಿರ್ಧಾರ, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅಣಿಯಾಗಿರುವ ಎನ್. ಶ್ರೀನಿವಾಸ್ ಅವರಿಗೆ ಹಿನ್ನಡೆ ತಂದಿದೆ. ವರದಿಯಲ್ಲಿ ಶ್ರೀನಿವಾನ್ ವಿರುದ್ಧ ಯಾವುದೇ ಅಂಶಗಳಿಲ್ಲದಿದ್ದರೆ ಅವರು ಚುನಾವಣೆಗೆ ಅವಶ್ಯವಾಗಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ, ಶುಕ್ರವಾರದವರೆಗೂ ಶ್ರೀನಿವಾಸ್ ಕಾಯಬೇಕಾದ ಪರಿಸ್ಥಿತಿ ಉದ್ಭವವಾಗಿದೆ.
ಹೆಸರು ಬಹಿರಂಗವಿಲ್ಲ: ಏತನ್ಮಧ್ಯೆ, ತನಿಖಾ ವರದಿಯಲ್ಲಿರುವ ಆಟಗಾರರ ಹೆಸರುಗಳನ್ನು ಬಹಿರಂಗಗೊಳಿಸಬಾರದು ಎಂದು ಬಿಸಿಸಿಐ ಮಾಡಿದ್ದ ಮನವಿಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯ ಹೆಸರುಗಳನ್ನು ತನಿಖಾ ವರದಿಯಲ್ಲಿ ನೇರವಾಗಿ ಉಲ್ಲೇಖಿಸಲಾಗಿಲ್ಲ. ಹಗರಣದಲ್ಲಿ ಭಾಗಿಯಾಗಿರುವವರ ಹೆಸರಗಳನ್ನು ಸಂಕೇತ ಪದ(ಕೋಡ್ವರ್ಡ್)ನಲ್ಲಿ ಉಲ್ಲೇಖಿಸಲಾಗಿದೆ ಎಂದು ಕೋರ್ಟ್ ಹೇಳಿದೆ. ಆದರೂ ಸಹ ಈ ಕುರಿತು ಶುಕ್ರವಾರವೇ ಕೋರ್ಟ್ ತನ್ನ ಅಂತಿಮ ತೀರ್ಪು ಪ್ರಕಟಿಸಲು ನಿರ್ಧರಿಸಿದೆ.
ಗಂಗೂಲಿ ವರದಿ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಫಿಕ್ಸಿಂಗ್ ಕುರಿತು ತನಿಖೆ ನಡೆಸಿ ಸಲ್ಲಿಸಿರುವ ವರದಿಯೂ ಅಡಕವಾಗಿದೆ ಎಂದು ಮೂಲಗಳು ಹೇಳಿವೆ. ಗಂಗೂಲಿ ಸಹ ಮುದ್ಗಲ್ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
Advertisement