ತಿರುವನಂತಪುರ: ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಟೂರ್ನಿ ಕೇರಳದಲ್ಲಿ ನಡೆಯುತ್ತಿದ್ದು, ಸುದೀರ್ಘ 25 ವರ್ಷಗಳ ನಂತರ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿ ಇಲ್ಲಿಗೆ ಆಗಮಿಸಿದೆ. ಆದರೆ, ಅವ್ಯವಸ್ಥೆಗಳು ಹೆಚ್ಚಾಗಿದ್ದರಿಂದ ಪಂದ್ಯಾವಳಿಯ ಆಯೋಜಕರ ವಿರುದ್ಧ ತರಬೇತುದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಭಾರತ ತಂಡದ ಕೋಚ್ ಸ್ಟೀಫನ್ ಕಾನ್ ಸ್ಟಾಂಟೀನ್, ಈ ಟೂರ್ನಿಯ ಆಯೋಜನೆಯಲ್ಲಿ ಯಾವುದೂ ಸರಿ ಇಲ್ಲ, ಎಲ್ಲವೂ ಅನಾನುಕೂಲದಿಂದ ಕೂಡಿದೆ. ``ಕೊಠಡಿಯನ್ನು ಪಡೆಯಲು ನಾನು 1 ಗಂಟೆ ಕಾಯಬೇಕೇ?'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಆಫ್ಘಾನಿಸ್ತಾನದ ಕೋಚ್ ಪೀಟರ್ ಸೆಗರ್ಟ್ ಸಹ ಸಂಘಟಕರ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ``ನಮ್ಮ ತಂಡ ಬಸ್ಗಾಗಿ ಸುದೀರ್ಘ 45 ನಿಮಿಷಗಳ ಕಾಲ ಕಾಯಬೇಕಾಯಿತು. ಅಲ್ಲದೆ ನಮ್ಮ ಕೊಠಡಿಯನ್ನು ಬೇರೆಯವರು ಮೊದಲೇ ಕಾಯ್ದಿರಿಸಿ ದ್ದರಿಂದ ನಾವು ಬೇರೆಡೆಗೆ ಸ್ಥಳಾಂತರಗೊಳ್ಳಬೇಕಾಯಿತು''ಎಂದರು.
ಶ್ರೀಲಂಕಾ ಶುಭಾರಂಭ: ಪಂದ್ಯದ ಅಂತಿಮ ಘಟ್ಟದಲ್ಲಿ ಮಿಡ್ ಫೀಲ್ಡರ್ ದಾಖಲಿಸಿದ ಗೋಲಿನ ನೆರವಿನಿಂದ ಶ್ರೀಲಂಕಾ ತಂಡ ಸ್ಯಾಫ್ ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬುಧವಾರ ತಿರುವನಂತಪುರ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ 1-0 ಗೋಲುಗಳ ಅಂತರದಲ್ಲಿ ನೇಪಾಳ ವಿರುದ್ಧ ಜಯ ಸಾಧಿಸಿತು. ಶ್ರೀಲಂಕಾ ಪರ ಮೊಹಮ್ಮದ್ ರಿಫ್ನಾಸ್ 94ನೇ ನಿಮಿಷದಲ್ಲಿ ಗೋಲು ತಮ್ಮದಾಗಿಸಿಕೊಂಡರು.
Advertisement