ನವದೆಹಲಿ: ಇತ್ತೀಚೆಗಷ್ಟೇ ಕೆನಡಾ ಓಪನ್ ಜೊತೆ ಪ್ರಶಸ್ತಿ ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟ, ರಾಷ್ಟ್ರೀಯ ಕಂಡದ ಕೋಚ್ ಗೋಪಿ ಚಂದ್ ವಿರುದ್ಧ ಕಿಡಿಕಾರಿದ್ದಾರೆ.
ನಾನು ಯಾವಾಗಲೂ ಗೆದ್ದಾಗ ಮಾತ್ರ ಮಾತನಾಡುತ್ತೇನೆ ಕಾರಣ, ಗೆದ್ದ ನಂತರವಷ್ಟೇ ಜನರು ನನ್ನ ಮಾತು ಕೇಳಲು ಸಿದ್ಧರಾಗುತ್ತಾರೆ. ಅಶ್ವಿನಿ ಮತ್ತು ನಾನು ಸಾಕಷ್ಟು ಸಾಧನೆ ಮಾಡಿದ್ದೇವೆ. ಆದರೆ ನಮಗೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ. ಇದಕ್ಕೆ ಕಾರಣ ಗೋಪಿ ಚಂದ್. ನಾವು ಈಗ 13 ನೇ ರ್ಯಾಂಕಿಂಗ್ ನಲ್ಲಿ ಇದ್ದೇವೆ. ನಮ್ಮನ್ನು ಬೆಂಬಲಿಸುವ ಬದಲು ಅವರು ಕೆಳಗೆ ಬೀಳಿಸಲು ನೋಡುತ್ತಿದ್ದಾರೆ. ಹಾಗಾಗಿ ಈಗ ಮಾತನಾಡುತ್ತಿದ್ದು, ಈ ಗೆಲುವು ನಮಗೆ ಒಲಿಂಪಿಕ್ಸ್ ಪೋಡಿಯಂ ಫಿನಿಶ್ ಯೋಜನೆಗೆ ಸೇರಿಸಲು ನೆರವಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಾವು ಗೆದ್ದ ನಂತರ, ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕ್ರೀಡಾ ಸಚಿವಾಲಯ ಸೇರಿದಂತೆ ಹಲವೆಡೆಗಳಿಂದ ಪ್ರತಿಕ್ರಿಯೆ ಬಂದಿವೆ. ಆದರೆ ಗೋಪಿಚಂದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಆಗಿರುವ ಅವರು ನಮ್ಮ ಈ ಗೆಲುವನ್ನು ಸ್ವಾಗತಿಸಬೇಕಿತ್ತು. ನಾವು 2011ರಲ್ಲಿ ವಿಶ್ವ ಚ್ಯಾಂಪಿಯನ್ ಶಿಪ್ ಗೆದ್ದೆವು. 2010 ಮತ್ತು 2014 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದೆವು. ಇದಿ ದೇಶಕ್ಕೆ ಮೊದಲ ಸಾಧನೆ ಎನಿಸಿತ್ತು. ಆದರೂ ನಮ್ಮನ್ನು ಒಲಿಂಪಿಕ್ಸ್ ಪೊಡಿಯಂಗೆ ಸೇರಿಸಿಕೊಂಡಿಲ್ಲ ಯಾಕೆ? ನಾವು ಗೋಪಿಚಂದ್ ಅಕಾಡೆಮಿಯಿಂದ ಬಂದಿಲ್ಲ ಎಂಬ ಕಾರಣವೇ? ಗುರು ಸಾಯಿದತ್ 43ನೇ ರ್ಯಾಂಕಿಂಗ್ ಪಡೆದಿದ್ದರೂ ಅವರಿಗೆ ಸ್ಥಾನ ನೀಡಲಾಗಿದೆ. ಸರ್ಕಾರ ಅಥವಾ ಗೋಪಿಚಂದ್, ಭಾರತ ಮಹಿಳೆಯರ ಡಬಲ್ಸ್ ವಿಭಾಗ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹವಿಲ್ಲ ಎಂದು ಚಿಂತಿಸುವುದಾದರೇ ಇದರ ಹಿಂದೆ ಬಲವಾದ ಕಾರಣವಿರಬೇಕು ಹಾಗಾಗಿ ಗೋಪಿಚಂದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜ್ವಾಲಾಗೆ ಅಶ್ವಿನಿ ಬೆಂಬಲ: ಸಹ ಆಟಗಾರ್ತಿ ಜ್ವಾಲಾ ಗುಟ್ಟ ಅವರ ಮಾತಿಗೆ ಅಶ್ವಿನಿ ಪೊನ್ನಪ್ಪ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಕೋಚ್ ಈ ಗೆಲುವಿಗೆ ಮೊದಲು ಹೆಮ್ಮೆ ಪಡಬೇಕಿತ್ತು. ಅಲ್ಲದೆ ಅವರು ನಮ್ಮನ್ನು ಮೊದಲು ಅಭಿನಂದಿಸಬೇಕಿತ್ತು. ಆದರೆ ನನ್ನ ಹಾಗೂ ಜ್ವಾಲಾ ವಿಷಯದಲ್ಲಿ ಅದು ಸಾದ್ಯವಾಗಿಲ್ಲ. ಗೊಪಿಚಂದ್ ಎಲ್ಲರನ್ನು ಸಮನಾಗಿ ನೋಡುವುದಾಗಿದ್ದರೆ,ಅವರು ಈ ಗೆಲುವಿಗೆ ಸಂತಸ ವ್ಯಕ್ತಪಡಿಸುತ್ತಿದ್ದರು. ಜ್ವಾಲಾ ಹೇಳಿದಂತೆ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದಿದ್ದಾರೆ.
ಪ್ರಾಯೋಜಕತ್ವಕ್ಕೆ ನಾನು ಹೊಣೆಯೇ? ಜ್ವಾಲಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೋಪಿಚಂದ್, ನಾನು ಜ್ವಾಲಾ ಗುಟ್ಟಾ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜ್ವಾಲಾ ಅವರನ್ನು ಸ್ವಾಗತಿಸಲು ನಾನು ಅಧ್ಯಕ್ಷನಾಗಿರುವ ರಂಗಾರೆಡ್ಡಿ ಸಂಸ್ಥೆಯಿಂದ ಪ್ರತಿನಿಧಿಯನ್ನು ಕಳುಹಿಸಿದ್ದೆ. ಜ್ವಾಲಾ ಅಭಿನಂದನೆ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ, ಟೂರ್ನಿ ಮುಗಿದು ಇನ್ನು ಒಂದು ವಾರವೂ ಆಗಿಲ್ಲ. ನಾನು ಫೇಸ್ ಬುಕ್ ಅಥವಾ ಟ್ವೀಟರ್ ನಲ್ಲಿಲ್ಲ. ಹಾಗಾಗಿ ಪೋಸ್ಟ್ ಮಾಡಲು ಸಾಧ್ಯವಾಗಿವಾಗಿಲ್ಲ. ಮಂಗಳವಾರ ನಾನು ರಾಷ್ಟ್ರಪತಿ ಅವರೊಂದಿಗೆ ಭೋಜನ ವಿರಾಮ ಕಾರ್ಯಕ್ರಮದಲ್ಲಿದ್ದೆ. ಜ್ವಾಲಾ ಮತ್ತು ಅಶ್ವಿನಿ ಅವರನ್ನು ಬೆಂಬಲಿಸಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಅವರು 200ಕ್ಕೂ ಹೆಚ್ಚು ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ನಾನು ಅವರ ಹೆಸರು ಸೂಚಿಸದಿದ್ದರೇ ಟೂರ್ನಿಗಳಲ್ಲಿ ಭಾಗವಹಿಸಲು ಹೇಗೆ ಸಾಧ್ಯವಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
Advertisement