ನವದೆಹಲಿ: ಐಪಿಎಲ್ ನಲ್ಲಿ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ನಡೆಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್ ನ ಮಾಲೀಕ ರಾಜ್ ಕುಂದ್ರಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನ ಗುರುನಾಥ್ ಮೆಯಪ್ಪನ್ ಗೆ ಬಿಸಿಸಿಐ ಆಜೀವ ನಿಷೇಧ ವಿಧಿಸಿದೆ.
ಬೆಟ್ಟಿಂಗ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ನ್ಯಾ.ಲೋಧಾ ಸಮಿತಿ ಜು.14 ರಂದು ತೀರ್ಪು ಪ್ರಕಟಿಸಿದ್ದು, ಗುರುನಾಥ್ ಮೆಯಪ್ಪನ್ ಹಾಗೂ ರಾಜ್ ಕುಂದ್ರಾ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಹೇಳಿದೆ.
ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರುವ ಸಮಿತಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡವನ್ನು 2 ವರ್ಷ ಅಮಾನತು ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪ್ರಾಂಚೈಸಿಗಳು ಅಮಾನತುಗೊಳಿಸಲಾಗಿದ್ದು ಈ ತಂಡದಲ್ಲಿರುವ ಆಟಗಾರರಿಗೆ ಈ ಆದೇಶ ಅನ್ವಯವಾಗುವುದಿಲ್ಲ. ತೀರ್ಪು ಪ್ರಕಟಣೆ ವೇಳೆ ಗುರುನಾಥ್ ಮೇಯಪ್ಪನ್ ನಿಂದಾಗಿ ಸಿಎಸ್ ಕೆ ತಂಡದ ವರ್ಚಸ್ಸಿಗೆ ಧಕ್ಕೆ ಬಂದಿರುವುದಾಗಿ ಸಮಿತಿ ಅಭಿಪ್ರಾಯಪಟ್ಟಿದೆ.
ಐಪಿಎಲ್ ಸೀಸನ್ 6 ರಲ್ಲಿ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವ ಮೆಯಪ್ಪನ್, ರಾಜ್ ಕುಂದ್ರಾ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಆಜೀವ ನಿಷೇಧ ವಿಧಿಸಲಾಗಿದ್ದು ನಿಷೇಧ ಇಂದಿನಿಂದಲೇ ಜಾರಿಗೆ ಬರಲಿದೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ಬಗ್ಗೆ ಸುಪ್ರೀಂಕೋರ್ಟ್ ನ್ಯಾ.ಆರ್.ಎಂ.ಲೋಧಾ ನೇತೃತ್ವದ ಮೂವರು ಸದಸ್ಯರ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿತ್ತು. ಬೆಟ್ಟಿಂಗ್ ಹಗರಣದ ಕುರಿತು ನ್ಯಾ|ರಾಜೇಂದ್ರಮಲ್ ಲೋಧಾ ನೇತೃತ್ವದ ಸಮಿತಿ ತನಿಖೆ ನಡೆಸಿತ್ತು.
Advertisement