ಪ್ರೊ ಕಬಡ್ಡಿ ಕೊಂಡಾಟ ಶುರು
ಮುಂಬೈ: ಭಾರಿ ನಿರೀಕ್ಷೆ ಮೂಡಿಸಿರುವ ದ್ವಿತೀಯ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಶನಿವಾರ ನಡೆದ ಮೊದಲ ಪಂದ್ಯವೇ ರೋಚಕತೆಯ ತುತ್ತ ತುದಿಗೇರಿ ಪ್ರೇಕ್ಷಕರಲ್ಲಿ ಸಂಚಲನ ಸೃಷ್ಟಿಸಿತು.
ಮೊದಲ ದಿನವೇ ನಡೆದ ಎರಡು ಪಂದ್ಯಗಳಲ್ಲಿ ಯು ಮುಂಬಾ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಜಯ ಗಳಿಸಿ ಗೆಲವಿನ ಶುಭಾರಂಭ ಮಾಡಿವೆ. ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಸೆಣಸಿದ ಬೆಂಗಳೂರು ತಂಡ, 3325 ಅಂಕಗಳ ಅಂತರದಲ್ಲಿ ಜಯ ದಾಖಲಿಸಿತು. ಕರ್ನಾಟಕದ ಪರ ವಿಜಯï ಠಾಕೂರ್ ಅವರು 11 ಅಂಕ ಪಡೆದು ಕರ್ನಾಟಕದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಂಗಾಲ್ ತಂಡದಲ್ಲಿ, ದಿನೇಶ್ ಕುಮಾರ್ ಅವರು 6 ಅಂಕಗಳನ್ನು ಗಳಿಸಿ, ತಮ್ಮ ತಂಡದಲ್ಲಿ ಗರಿಷ್ಠ ಅಂಕ ಪೇರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.
ಜೈಪುರಕ್ಕೆ ವೀರೋಚಿತ ಸೋಲು:
ಇಲ್ಲಿನ ಎನ್ಎಸ್ ಸಿಐ ಕ್ರೀಡಾಂಗಣದಲ್ಲಿ ನಡೆದ ಈ ಋತುವಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಥ್ಯಾಂಕರ್ಸ್ ವಿರುದ್ಧ ಮಿಂಚಿನ ಆಟವಾಡಿದ ಯು ಮುಂಬೈ 2928 ಅಂಕಗಳ ರೋಚಕ ಗೆಲುವು ಪಡೆಯಿತು. ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಯು ಮುಂಬೈ ತಂಡ ಈ ಮೂಲಕ ಜೈಪುರ ಥ್ಯಾಂಕರ್ಸ್ ವಿರುದ್ಧ ಪ್ರತೀಕಾರ ತೀರಿಸಿಕೊಂಡಿತು.
ಮುಂಬೈ ತಂಡದ ಜೀವಾ ಕುಮಾರ್ 9 ಅಂಕ ಗಳಿಸುವ ಮೂಲಕ ತಮ್ಮ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜೈಪುರ ತಂಡದಲ್ಲಿ ಕುಲ್ದೀಪ್ ಸಿಂಗ್ ಅವರು ಗರಿಷ್ಠ 6 ಅಂಕ ಗಳಿಸಿದರು. ಕಳೆದ ವರ್ಷದ ಪ್ರೊ ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ, ಬಾಲಿವುಡ್ ನಿರ್ಮಾಪಕ ರೊನಿ ಸ್ಕ್ರೀವಾಲಾ ಅವರ ಮಾಲೀಕತ್ವದ ಯು ಮುಂಬಾ ತಂಡ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ್ ತಂಡದ ವಿರುದ್ಧ ಸೋತು ಚಾಂಪಿಯನ್ ಪಟ್ಟ ಕೈತಪ್ಪಿಸಿಕೊಂಡಿತ್ತು. ಈ ಬಾರಿಯ ಟೂರ್ನಿಯಲ್ಲಿ, ಅದೇ ತಂಡಕ್ಕೆ ಸೆಡ್ಡು ಹೊಡೆದು ಜಯ ಸಾ„ಸುವ ಮೂಲಕ, ಈ ಬಾರಿಯೂ ಚಾಂಪಿಯನ್ ಪಟ್ಟದ ಆಕಾಂಕ್ಷಿ ಎಂಬುದನ್ನು ಸಾಬೀತುಪಡಿಸಿದೆ.
ಸ್ಟಾರ್ಗಳ ಸಮ್ಮುಖದಲ್ಲಿ ಭರ್ಜರಿ ಆರಂಭ
ಟೂರ್ನಿಯ ಎರಡನೇ ಆವೃತ್ತಿಗೆ ಗೆ ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು. ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ 8 ತಂಡಗಳ ಆಟಗಾರರು ಹಾಗೂ ಫ್ರಾಂಚೈಸಿ ಮಾಲೀಕರು ಹಾಜರಿದ್ದರು. ಸಮಾರಂಭದ ಆರಂಭದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ರಾಷ್ಟ್ರಗೀತೆ ಹಾಡಿ ಎಲ್ಲರಲ್ಲೂ ಮಿಂಚಿನ ಸಂಚಾರ ಉಂಟುಮಾಡಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ನೂರಾರು ಅಭಿಮಾನಿಗಳು ಚಪ್ಪಾಳೆ, ಶಿಳ್ಳೆಗಳ ಮೂಲಕ ಸಮಾರಂಭದ ಉದ್ಘಾಟನೆ ವೇಳೆ ಮೆರುಗು ತಂದರು. ಬಾಲಿವುಡ್ ದಿಗ್ಗಜರಾದ ಅಮೀರ್ ಖಾನ್, ರಿಶಿಕಪೂರ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಸೇರಿದಂತೆ ಅನೇಕರು ಪ್ರೊ ಕಬಡ್ಡಿಗೆ ಕಿಚ್ಚು ಹಚ್ಚಿದರು.