ಆಕ್ಲೆಂಡ್: ಹಾಲಿ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದೊಂದಿಗೆ ಮುಖಾಮುಖಿಯಾಗಲಿರುವ ಬಾಂಗ್ಲಾದೇಶ ತಂಡ ಅಪಾಯಕಾರಿಯಾಗಿದ್ದು ಈ ಪಂದ್ಯವನ್ನು ಭಾರತ ಹಗುರವಾಗಿ ಪರಿಗಣಿಸಕೂಡದು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಎಚ್ಚರಿಸಿದ್ದಾರೆ.
ಮಾ.19ರಂದು ಮೆಲ್ಬರ್ನ್ ನಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಸ್ಪರ ಆಡಲಿವೆ.
ಲೀಗ್ ಹಂತದ ಅಂಕಪಟ್ಟಿಯ ಪ್ರಕಾರ, ಬೀ ಗುಂಪಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ವಿಶ್ವಕಪ್ ಟೂರ್ನಿಯ ಮಾದರಿಯಂತೆ ಪ್ರಕಾರ, ಬಿ ಗುಂಪಿನ ಅಗ್ರ ತಂಡ, ಎ ಗುಂಪಿನ ನಾಲ್ಕನೇ ಸ್ಥಾನದಲ್ಲಿರುವ ತಂಡದೊಂದಿಗೆ ಕ್ವಾರ್ಟರ್ ಫೈನಲ್ ಸೆಣಸಬೇಕು. ಹಾಗಾಗಿ, ಭಾರತ ಎ ಗುಂಪಿನ ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ.
ಇನ್ನು, ಏಕದಿನ ರ್ಯಾಂಕಿಂಗ್ ನಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 9ನೇ ಸ್ಥಾನದಲ್ಲಿದೆ. ಮೇಲ್ನೋಟಕ್ಕೆ ಈ ಅಂಕಿ-ಅಂಶ, ಭಾರತ ತಂಡಕ್ಕಿಂತ ಬಾಂಗ್ಲಾದೇಶ ತಂಡ ದುರ್ಬಲ ಎಂದು ಹೇಳುವಂತಿದ್ದರೂ, ವಾಸ್ತವದಲ್ಲಿ ಹಾಗೆ ಪರಿಗಣಿಸಲಾಗದು ಎಂಬದು ಗಾವಸ್ಕರ್ ಎಣಿಕೆ.
ಈ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಈವರೆಗೆ ಉತ್ತಮವಾಗಿ ಆಡಿದೆ. ಇಂಗ್ಲೆಂಡ್ ತಂಡಕ್ಕೆ ಮಣ್ಣುಮುಕ್ಕಿಸಿರುವ ಅದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವೀರೋಚಿತ ಆಟ ಪ್ರದರ್ಶಿಸಿದೆ. ಹಾಗಾಗಿ, ಭಾರತ ತಂಡ, ಬಾಂಗ್ಲಾದೇಶವನ್ನು ಹಗುರವಾಗಿ ಪರಿಗಣಿಸಕೂಡದು ಎಂದಿದ್ದಾರೆ.
Advertisement