ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಜಯ

ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಂಧ್ರ ವಿರುದ್ಧ ಸೋತು ಮುಖಭಂಗ ಅನುಭವಿಸಿದರೂ, ಎರಡನೇ ಪಂದ್ಯದಲ್ಲಿ ಗೋವಾ ವಿರುದ್ಧ ಗೆಲವು ದಾಖಲಿಸಿದೆ.
ಕರ್ನಾಟಕ ತಂಡ
ಕರ್ನಾಟಕ ತಂಡ

ಕೊಚ್ಚಿ: ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಆಂಧ್ರ ವಿರುದ್ಧ ಸೋತು ಮುಖಭಂಗ ಅನುಭವಿಸಿದರೂ, ಎರಡನೇ ಪಂದ್ಯದಲ್ಲಿ ಗೋವಾ ವಿರುದ್ಧ ಗೆಲವು ದಾಖಲಿಸಿದೆ.

ಗುರುವಾರ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಎದುರಾಳಿ ಗೋವಾ ತಂಡವನ್ನು 4 ವಿಕೆಟ್‍ಗಳ ಅಂತರದಲ್ಲಿ ಮಣಿಸಿತು. ಟಾಸ್ ಗೆದ್ದ ಕರ್ನಾಟಕ ಮೊದಲು ಫಿಲ್ಡಿಂಗ್ ಮಾಡಲು ನಿರ್ಧರಿಸಿತು. ಆನಂತರ ಗೋವಾ ತಂಡವನ್ನು 20 ಓವರ್‍ಗಳಲ್ಲಿ 7 ವಿಕೆಟ್ ಪಡೆದು 113 ರನ್‍ಗಳಿಗೆ ನಿಯಂತ್ರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ 18 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 144 ರನ್ ದಾಖಲಿಸಿ ಜಯದ ದಡ ಸೇರಿತು.

ಗೋವಾ ಪರದಾಟ: ಕರ್ನಾಟಕದ ದಾಳಿಯ ಮುಂದೆ ಗೋವಾ ತಂಡದ ಅಗ್ರ ಐವರು ಬ್ಯಾಟ್ಸ್ ಮನಗಳು ಎರಡಂಕಿಯ ಗಡಿ ದಾಟಲು ಸಾಧ್ಯವಾಗಲಿಲ್ಲ. ಆರಂಭಿಕ ಸಗುಣ್ ಕಾಮತ್ (0), ಸ್ವಪ್ನಿಲ್ ಆಸ್ನೋಡ್ಕರ್ (1), ಸುನೀಲ್ ದೇಸಾಯ್(8), ಕಿನಾನ್ ವಜ್ (2), ರೋಹಿತ್ ಆಸ್ನೋಡ್ಕರ್ (6) ನಿರಂತರವಾಗಿ ವಿಕೆಟ್ ಒಪ್ಪಿಸಿದರು. ಕರ್ನಾಟಕದ ಬೌಲಿಂಗ್ ಅನ್ನು ಎದುರಿಸಲು ಸಾಧ್ಯವಾಗದ ಗೋವಾ ತಂಡದ ಬ್ಯಾಟ್ಸ್ ಮನ್‍ಗಳು ತರಗೆಲೆಗಳಂತೆ ಉದುರಿದರು. ಪರಿಣಾಮ 27 ರನ್‍ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.

ಈ ವೇಳೆ ಚುರುಕಿನ ಆಟದ ಪ್ರದರ್ಶನ ನೀಡಿದ ದರ್ಶನ್ ಮಿಸಲ್ (41) ತಂಡ 100ರ ಗಡಿ ತಲುಪಲು ನೆರವಾದರು. ಅಂತಿಮದಲ್ಲಿ ಶೇರ್ ಯಾದವ್ (17), ರಾಬಿನ್ ಡಿಸೊಜಾ (ಅಜೇಯ 20), ಅಮಿತ್ ಯಾದವ್ (ಅಜೇಯ 12) ಜಿಗುಟಿನ ಆಟ ಪ್ರದರ್ಶಿಸಿದರು. ಕರ್ನಾಟಕ ತಂಡದ ಪರ ಮಥಿಯಾಸ್ 3, ಅರವಿಂದ್, ಶರತ್, ಕ್ರಾಂತಿ ಕುಮಾರ್ ಹಾಗೂ ಶ್ರೇಯಸ್ ತಲಾ 1 ವಿಕೆಟ್ ಪಡೆದರು.

ಸುಲಭ ಜಯ: ಅಲ್ಪ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತಾದರೂ ನಂತರ ಚೇತರಿಸಿಕೊಂಡು ಜಯದ ದಡ ಸೇರುವಲ್ಲಿ ಯಶಸ್ವಿಯಾಯಿತು. ಆರಂಭಿಕ ಆರ್. ಸಮರ್ಥ್ ರನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಮನೀಷ್ ಪಾಂಡೆ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. 24 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡ ಕರ್ನಾಟಕ ಸ್ವಲ್ಪ ಒತ್ತಡಕ್ಕೆ ಸಿಲುಕಿತಾದರೂ, ಮಾಯಾಂಕ್ ಅಗರ್ವಾಲ್ (36) ಮತ್ತು ಕರುಣ್ ನಾಯರ್ (30) ಅವರ ಬ್ಯಾಟಿಂಗ್ ನೆರವಿನಿಂದ ಚೇತರಿಕೆ ಕಂಡಿತು. ಇನ್ನು ಅಂತಿಮದವರೆಗೂ ಅಜೇಯರಾಗುಳಿದ ಶ್ರೇಯಸ್ ಗೋಪಾಲ್ (23) ತಂಡವನ್ನು ಗೆಲವಿನ ಗುರಿ ತಲುಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com