ವಾರಿಯರ್ಸ್ ಗೆ ಮೊದಲ ಜಯದ ಸವಿ

ಸತತ ಎರಡು ಪಂದ್ಯಗಳ ಸೋಲಿನಿಂದ ಜರ್ಜರಿತವಾಗಿದ್ದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್, ಸೋಮವಾರ ಆರಂಭಿಕ ಆಟಗಾರ ಅರ್ಜುನ್ ಹೊಯ್ಸಳ...
ಮೈಸೂರ್ ವಾರಿಯರ್ಸ್
ಮೈಸೂರ್ ವಾರಿಯರ್ಸ್

ಹುಬ್ಬಳ್ಳಿ: ಸತತ ಎರಡು ಪಂದ್ಯಗಳ ಸೋಲಿನಿಂದ ಜರ್ಜರಿತವಾಗಿದ್ದ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್, ಸೋಮವಾರ ಆರಂಭಿಕ ಆಟಗಾರ ಅರ್ಜುನ್ ಹೊಯ್ಸಳ ತೋರಿದ ಸಮಯೋಚಿತ ಬ್ಯಾಟಿಂಗ್ ಹಾಗೂ ಸುಚಿನ್ ನಡೆಸಿದ ಚುರುಕಿನ ದಾಳಿಯಿಂದಾಗಿ ಬಳ್ಳಾರಿ ಟಸ್ಕರ್ಸ್ ತಂಡವನ್ನು 5 ವಿಕೆಟ್‍ಗಳಿಂದ ಮಣಿಸಿ ಈ ಋತುವಿನ ಕೆಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸವಿಯುಂಡಿತು.

ಪಂದ್ಯದ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಬಳ್ಳಾರಿ ತಂಡ, 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೈಸೂರು ತಂಡ 19.1 ಓವರ್‍ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 123 ರನ್ ಪೇರಿಸಿ ಗೆಲುವಿನ ನಗೆಬೀರಿತು.

ಇಲ್ಲಿನ ರಾಜನಗರದ ಕೆಎಸ್‍ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಮೈಸೂರು ತಂಡದ ನಾಯಕ ಮನೀಶ್ ಪಾಂಡೆ, ಎದುರಾಳಿ ತಂಡಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ಕಲ್ಪಿಸಿದರು. ಮೊದಲ ಬ್ಯಾಟ್ ಮಾಡಿದ ಬಳ್ಳಾರಿ ತಂಡ, ಆರಂಭದಲ್ಲೇ ಆಘಾತ ಅನುಭವಿಸಿತು. ಕೇವಲ 4 ರನ್ ಮೊತ್ತಕ್ಕೆ ಆರಂಭಿಕ ಭರತ್ ಚಿಪ್ಲಿಯನ್ನು ಕಳೆದುಕೊಂಡ ಅದು, ಅದೇ ಮೊತ್ತಕ್ಕೆ ಮತ್ತೊಬ್ಬ ಆರಂಭಿಕ ದೇಶಪಾಂಡೆಯನ್ನೂ ಕಳೆದುಕೊಂಡಿತು.

ಇದಾದ ಮೇಲೆ ಜತೆಯಾದ ಅಮಿತ್ ವರ್ಮಾ ಹಾಗೂ ನಾಯಕ ದೇವರಾಜ್ ಪಾಟೀಲ್ ತಂಡದ ಮೊತ್ತವನ್ನು 50 ರನ್ ಗಡಿಗೆ ತಂದು ನಿಲ್ಲಿಸಿದರು. ಆನಂತರ, ಇನ್ನಿಂಗ್ಸ್ ಗೆ ಆಸರೆಯಾದ ಅನಿರುದ್ಧ ಜೋಷಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ, ತಂಡದ ಮೊತ್ತ ಗಣನೀಯವಾಗಿ ಏರಲು ಸಹಕರಿಸಿದರು. ವಾರಿಯರ್ಸ್ ತಂಡದ ಪರ ಸುಚಿನ್ ಐದು ವಿಕೆಟ್ ಪಡೆದು ವಿಜೃಂಭಿಸಿದರು. ಸುಲಭ ಸವಾಲನ್ನು ಬೆನ್ನಟ್ಟಿದ ಮೈಸೂರು ತಂಡ ಆರಂಭದಲ್ಲೇ ಆತಂಕಕ್ಕೆ ಒಳಗಾಯಿತು. ಕೇವಲ 26 ರನ್ ಮೊತ್ತಕ್ಕೆ ಆರಂಭಿಕ ಮನೀಶ್ ಪಾಂಡೆ ಅವರನ್ನು ಕಳೆದುಕೊಂಡಿತು. ಈ ಹಂತದಲ್ಲಿ ತಂಡಕ್ಕೆ ನೆರವಾದ ಮತ್ತೊಬ್ಬ ಆರಂಭಿಕ ಅರ್ಜುನ್ ಹೊಯ್ಸಳ 42 ರನ್ ಸಿಡಿಸಿ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com