ಮೈಸೂರು: ಸ್ಪಿನ್ ಮೋಡಿಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ತನ್ನ ಬಲೆಯೊಳಗೆ ಬೀಳಿಸಿಕೊಂಡ ಬಿಜಾಪುರ ಬುಲ್ಸ್, ಪ್ರಸಕ್ತ ಕೆಪಿಎಲ್ ಟೂರ್ನಿಯ ಫೈನಲ್ ಸುತ್ತಿಗೆ ಲಗ್ಗೆ ಹಾಕಿತು. ಶುಕ್ರವಾರ ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿ ಫೈಯರ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡವು ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 6 ವಿಕೆಟ್ಗಳ ಅಂತರದಲ್ಲಿ ಜಯ ಪಡೆಯಿತು. ಟಾಸ್ ಗೆದ್ದ ಬಿಜಾಪುರ ಬುಲ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ಪ್ಯಾಂಥರ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 118 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬಿಜಾಪುರ ಬುಲ್ಸ್ 16.4 ಓವರ್ಗಳಲ್ಲಿ 4 ವಿಕೆಟ್ಗೆ 122 ರನ್ ಕಲೆ ಹಾಕಿ ಜಯಭೇರಿ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಿಜಾಪುರ ಬುಲ್ಸ್, ಆರಂಭದಲ್ಲೇ ಮುಗ್ಗರಿಸಿತಾದರೂ ನಂತರ ಚೇತರಿಸಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಆರ್. ಸಮರ್ಥ್ ರನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ನಂತರ ಜತೆಯಾದ ರಾಜು ಭಟ್ಕಳ್ (23) ಹಾಗೂ ರಾಬಿನ್ ಉತ್ತಪ್ಪ (50) ತಂಡಕ್ಕೆ 73 ರನ್ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ನಂತರ ಬಂದ ಸುನೀಲ್ ರಾಜು (ಅಜೇಯ 19), ಅಖಿಲ್ (13) ಹಾಗೂ ನಿಧೇಶ್ (ಅಜೇಯ 11) ತಂಡವನ್ನು ಜಯದತ್ತ ಮುನ್ನಡೆಸಿದರು. ಪ್ಯಾಂಥರ್ಸ್ ಪರ ಸ್ಟಾಲಿನ್ ಹೂವರ್ 2 ಹಾಗೂ ವಿನಯ್ ತಲಾ 1 ವಿಕೆಟ್ ಪಡೆದರು.