ಬೆಂಗಳೂರು: ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ಸಮರ್ಥಿಸಿಕೊಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚೆಚ್ಚು ರನ್ ಗಳಿಸಬೇಕಾದ ಅನಿವಾರ್ಯತೆ ಇದ್ದು, ಮತ್ತೊಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಕರ್ನಾಟಕದ ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಜೈನ್ ವಿವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉತ್ತಪ್ಪ, ``ಮುಂದಿನ
ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ರನ್
ಕಲೆ ಹಾಕುತ್ತೇನೆ. ನಾನು ನಿರ್ದಿಷ್ಟ ಸ್ಥಾನವನ್ನು ಎದುರು ನೋಡುತ್ತಿಲ್ಲ. ಬ್ಯಾಟಿಂಗ್ ವಿಭಾಗದ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ನಾನು ಆಡಬಲ್ಲೆ. ಹಾಗಾಗಿ ಸದ್ಯಕ್ಕೆ ನಾನು ಅವಕಾಶವನ್ನು ಎದುರುನೋಡುತ್ತಿದ್ದೇನೆ. ಒಂದುವೇಳೆ ಅವಕಾಶ ಸಿಕ್ಕರೆ, ತಂಡದ ಜಯಕ್ಕೆ ಪೂರ್ಣ ಪರಿಶ್ರಮ ಹಾಕುತ್ತೇನೆ'' ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
``ಪ್ರಸ್ತುತ ನಾನು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ದೈಹಿಕವಾಗಿಯೂ ಫಿಟ್ ಆಗಿರುವ ನಾನು ಆಯ್ಕೆ ಸಮಿತಿ ನನಗೆ ಅವಕಾಶ ನೀಡಲಿದೆ ಎಂಬ ಭರವಸೆ ಇದೆ'' ಎಂದು ತಿಳಿಸಿದರು.
ಮೈ ಕಂಟ್ರಿ ರನ್ಗೆ ರಾಬಿನ್, ಆಡ್ವಾಣಿ ರಾಯಭಾರಿ: ನಗರದ ಜೈನ್ ಯುನಿವರ್ಸಿಟಿ ಮೊದಲ ಬಾರಿಗೆ ಮೈ ಕಂಟ್ರಿ ರನ್ 2016ರ ಓಟವನ್ನು ಆಯೋಜಿಸಿದ್ದು, ಟೂರ್ನಿಯ ರಾಯಭಾರಿಯಾಗಿ ಪ್ರಕಟಿಸಿದೆ. ಜ.31ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಓಟಕ್ಕೆ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ವಿಶ್ವ ಸ್ನೂಕರ್ ಚಾಂಪಿಯನ್ ಪಂಕಜ್ ಆಡ್ವಾಣಿ ರಾಯಭಾರಿಯಾಗಿದ್ದಾರೆ. ಇದು ಭಾರತದ ಮೊಟ್ಟ ಮೊದಲ ಪುರುಷ, ಮಹಿಳಾ ಮತ್ತು ಮಕ್ಕಳ ವಿವಿಧ ವಿಭಾಗಗಳನ್ನು ಒಳಗೊಂಡಿರುವ ಓಟವಾಗಿದೆ. ಸುಮಾರು 10 ಸಾವಿರ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಗಳಿವೆ. ಯುವ ಪೀಳಿಗೆಯಲ್ಲಿ ಕ್ರೀಡಾಸ್ಪೂರ್ತಿಯನ್ನು ನಿರ್ಮಿಸಿ, ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಈ ಓಟದ ಮುಖ್ಯ ಉದ್ದೇಶ ಎಂದು ಜೆಜಿಐ ಸಮೂಹದ ಮುಖ್ಯಸ್ಥ ಡಾ.ಚೆನ್ರಾಜ್ ರಾಯಾಚಂದ್ ತಿಳಿಸಿದ್ದಾರೆ.
Advertisement