ನವದೆಹಲಿ: ಸಾನಿಯಾ ಮಿರ್ಜಾ ಆತ್ಮಕಥನ ‘Ace Against Odds’ ಪುಸ್ತಕ ಬಿಡುಗಡೆ ಗೊಂಡಿದ್ದು, ಸಾನಿಯಾ ಮಿರ್ಜಾ ತಮ್ಮ ಆತ್ಮಕಥನದ ಬಗ್ಗೆ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ.
ತಮ್ಮ ಆತ್ಮಕಥನದ ಬಗ್ಗೆ ರಾಷ್ಟ್ರೀಯ ಖಾಸಗಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುವಾಗ ಪತ್ರಕರ್ತ ಕೇಳಿದ ತಾಯ್ತನದ ಬಗೆಗಿನ ಪ್ರಶ್ನೆಗೆ ಖಡಕ್ ಉತ್ತರ ನೀಡಿ, ಪತ್ರಕರ್ತ ಕ್ಷಮೆ ಕೇಳುವಂತೆ ಮಾಡಿದ್ದಾರೆ.
ಸೆಲಬ್ರಿಟಿ ಗೌರವದ ನಡುವೆ ಯಾವಾಗ ತಾಯಿ ಆಗ್ತೀರಿ? ಎಲ್ಲಿ ಯಾವಾಗ ಸೆಟ್ಲ್ ಆಗ್ತೀರಿ? ದುಬೈಗೆ ಹೋಗ್ತಿರಾ? ಅಥವಾ ಇನ್ನಾವುದಾದರೂ ದೇಶಕ್ಕೆ ಹೋಗೋ ಪ್ಲ್ಯಾನ್ ಇದೆಯಾ? ನಿವೃತ್ತಿ ಯಾವಾಗ, ಟೆನ್ನಿಸ್ ಹೊರತಾಗಿ ತಾಯ್ತನ, ಸಂಸಾರ ಇತ್ಯಾದಿಗಳ ಬಗ್ಗೆ ನಿಮ್ಮ ಪುಸ್ತಕದಲ್ಲಿ ಏನು ಹೇಳಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪತ್ರಕರ್ತ ಕೇಳಿದ ಈ ಪ್ರಶ್ನೆಗೆ ಸಮಾಧಾನವಾಗಿ ಅಷ್ಟೇ ಕಠಿಣವಾದ ಉತ್ತರ ನೀಡಿದ ಸಾನಿಯಾ ಮಿರ್ಜಾ ನಾನು ಸೆಟ್ಲ್ ಆಗಿದ್ದೀನಿ ಅಂತಾ ನಿಮಗೆ ಅನಿಸುತ್ತಿಲ್ವಾ? ನಾನು ಗೆದ್ದ ಪ್ರಶಸ್ತಿಗಳು ನಿಮಗೆ ಕಾಣಿಸುತ್ತಿಲ್ವಾ ಅಂತಾ ಕೇಳಿದ್ದಾರೆ.
ವಿಶ್ವ ನಂಬರ್ 1 ಆಗಿದ್ದರೂ ನಾನು ತಾಯ್ತನವನ್ನು ಆಯ್ಕೆ ಮಾಡಿಲ್ಲವೆಂಬ ನಿರಾಸೆ ನಿಮ್ಮ ದನಿಯಲ್ಲೇ ಗೊತ್ತಾಗುತ್ತಿದೆ. ಆದರೂ ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಒಬ್ಬ ಮಹಿಳೆಯಾಗಿ ನಾನು ಇಂಥಾ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ, ನಾನು ಮಾತ್ರವಲ್ಲ ಎಲ್ಲ ಮಹಿಳೆಯರೂ ಎದುರಿಸಬೇಕಾಗಿ ಬರುತ್ತದೆ. ಮಹಿಳೆಯೊಬ್ಬರಲ್ಲಿ ಮೊದಲು ಮದುವೆ ಯಾವಾಗ? ಎಂದು ಕೇಳಲಾಗುತ್ತದೆ. ಆಮೇಲೆ ತಾಯ್ತನದ ಬಗ್ಗೆ ಕೇಳುತ್ತಾರೆ. ನಾವೆಷ್ಟೇ ವಿಂಬಲ್ಡನ್ ಗೆದ್ದರೂ, ವಿಶ್ವದ ನಂಬರ್ ಒನ್ ಸ್ಥಾನಕ್ಕೇರಿದರೂ ನಾವು ಸೆಟಲ್ ಆಗಿದ್ದೇವೆ ಎಂದು ಅನಿಸುವುದೇ ಇಲ್ಲ, ಮುಂದೊಂದು ದಿನ ಸೆಟಲ್ ಆಗಿ ತಾಯಿಯಾಗುವ ಯೋಚನೆ ಇದ್ದರೆ ನಾನೇ ನಿಮಗೆ ಮೊದಲು ತಿಳಿಸುತ್ತೇನೆ ಎಂದು ತಕ್ಕ ಉತ್ತರ ನೀಡಿದ್ದಾರೆ.
ತಕ್ಷಣವೇ ರಾಜದೀಪ್ ಸರದೇಸಾಯಿ ಕ್ಷಮೆಯಾಚಿಸಿದ್ದಾರೆ. ಪ್ರಶ್ನೆಗಳನ್ನು ರೂಪಿಸಿದ ರೀತಿ ತಪ್ಪಾಗಿದೆ. ಇಂತಹ ಪ್ರಶ್ನೆಗಳನ್ನು ಇನ್ನು ಮುಂದೆ ಯಾವ ಅಥ್ಲೀಟ್ ಗೂ ಕೇಳುವುದಿಲ್ಲ ಎಂದು ಕ್ಷಮೆ ಯಾಚಿಸಿದ್ದಾರೆ. ನ್ಯಾಷನಲ್ ಚಾನೆಲ್ವೊಂದರಲ್ಲಿ ನನ್ನಲ್ಲಿ ಕ್ಷಮೆ ಕೇಳಿದ ಮೊದಲ ಪತ್ರಕರ್ತ ನೀವು ಎಂದು ಸಾನಿಯಾ ಹೆಮ್ಮೆಯ ನಗೆ ಬೀರಿದ್ದಾರೆ.
Advertisement