ಉದ್ದೀಪನ ಸೇವನೆ ಆರೋಪ: ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್

ಉದ್ದೀಪನ ಸೇವಿಸಿದ ಆರೋಪಕ್ಕೆ ಗುರಿಯಾಗಿದ್ದ 74ಕೆಜಿ ವಿಭಾಗದ ಭಾರತದ ಫ್ರೀ ಸ್ಟೈಲ್ ಕುಸ್ತಿಪಟು ನರಸಿಂಗ್ ...
ಮಾಧ್ಯಮಗಳ ಮುಂದೆ ಮಾತನಾಡುತ್ತಿರುವ ನರಸಿಂಗ್ ಯಾದವ್
ಮಾಧ್ಯಮಗಳ ಮುಂದೆ ಮಾತನಾಡುತ್ತಿರುವ ನರಸಿಂಗ್ ಯಾದವ್
ನವದೆಹಲಿ: ಉದ್ದೀಪನ ಸೇವಿಸಿದ ಆರೋಪಕ್ಕೆ ಗುರಿಯಾಗಿದ್ದ 74ಕೆಜಿ ವಿಭಾಗದ ಭಾರತದ ಫ್ರೀ ಸ್ಟೈಲ್ ಕುಸ್ತಿಪಟು ನರಸಿಂಗ್ ಯಾದವ್ ಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ಸೋಮವಾರ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಿದೆ.
ನರಸಿಂಗ್ ಯಾದವ್ ಅವರನ್ನು ಸಂಶಯದ ಮೇಲೆ ಬಲಿಪಶುವನ್ನಾಗಿ ಮಾಡಲಾಗಿದೆ. ನಿಷೇಧಿತ ಉದ್ದೀಪನ ಸೇವನೆ ಯಾದವ್ ಗೆ ತಿಳಿದಿರಲಿಲ್ಲ ಎಂದು ನಾಡಾದ ಮಹಾ ನಿರ್ದೇಶಕ ನವೀನ್ ಅಗರ್ವಾಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆ ಮೂಲಕ ಯಾದವ್ ರಿಯೋ ಒಲಿಂಪಿಕ್ಸ್ ನಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದು, ಅವರ ಅಭಿಮಾನಿಗಳಲ್ಲಿ ಸಂತಸವನ್ನುಂಟುಮಾಡಿದೆ.
74 ಕೆಜಿ ವಿಭಾಗದಲ್ಲಿ ಭಾರತ ಒಲಿಂಪಿಕ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದ ನರಸಿಂಗ್‌ ಯಾದವ್‌ ಇತ್ತೀಚೆಗಷ್ಟೇ ಎರಡು ಬಾರಿ ಉದ್ದೀಪನ ಪರೀಕ್ಷೆಯಲ್ಲಿ ವಿಫ‌ಲರಾಗಿದ್ದರು. ಹಾಗಾಗಿ ನರಸಿಂಗ್‌ ಭಾರತ ಒಲಿಂಪಿಕ್ಸ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಅವರ ಬದಲು ಪ್ರವೀಣ್‌ ರಾಣಾಗೆ ಅವಕಾಶ ಕೊಡಲಾಗಿತ್ತು. ಒಂದು ವೇಳೆ ನರಸಿಂಗ್‌ ತಪ್ಪಿತಸ್ಥರಲ್ಲ ಎಂದು ಸಾಬೀತಾದರೆ ಮತ್ತೆ ಅವಕಾಶ ನೀಡಲಾಗವುದೆಂದು ಭಾರತ ಒಲಿಂಪಿಕ್ಸ್‌ ಸಂಸ್ಥೆ ತಿಳಿಸಿತ್ತು.  ಪ್ರಕರಣದಲ್ಲಿ ತನ್ನ ತಪ್ಪಿಲ್ಲ, ನನ್ನನ್ನು ಉದ್ದೇಶಪೂರ್ವಕವಾಗಿ ಸಿಕ್ಕಿಸಲಾಗಿದೆ ಎಂದು ನರಸಿಂಗ್ ಯಾದವ್ ನಾಡಾ ಮುಂದೆ ವಾದಿಸಿದ್ದರು. ಆದ್ದರಿಂದ ನಾಡಾ ಸಮಿತಿ 2 ದಿನ ವಿಚಾರಣೆ ನಡೆಸಿತ್ತು.
ನರಸಿಂಗ್ ಯಾದವ್ ಕಳೆದ ವರ್ಷದ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ ಗಳಿಸಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು. ಆರೋಪದಿಂದ ಮುಕ್ತರಾದ ನರಸಿಂಗ್ ಯಾದವ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನನಗೆ ಬೆಂಬಲ ಸೂಚಿಸಿದ ಮಾಧ್ಯಮಗಳು, ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊನೆಗೂ ಸತ್ಯ ಹೊರಬಂದಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com