ನವದೆಹಲಿ: ಸ್ಲಂ ಯುವ ದೌಡ್ (ಸ್ಲಂ ಯುವಕರ ಓಟ) ಎರಡನೇ ಮ್ಯಾರಥಾನ್ ಗೆ ಕ್ರೀಡಾ ಸಚಿವ ವಿಜಯ್ ಗೋಯಲ್, ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರೊಂದಿಗೆ ಶನಿವಾರ ಚಾಲನೆ ನೀಡಿದ್ದಾರೆ.
ಈ ಮ್ಯಾರಥಾನ್ ಕರ್ಕಾರ್ದೂಮಡಾ ಕ್ರಾಸ್ ರಿವರ್ ಮಾಲ್ ನಿಂದ ಪ್ರಾರಂಭವಾಗಿ ಯಮುನಾ ಕ್ರೀಡಾ ಸಮುಚ್ಚಯದ ಬಳಿ ಮುಕ್ತಾಯಗೊಂಡಿದೆ. ಇದರಲ್ಲಿ ೫೦೦೦ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದಾರೆ.
ಸ್ಲಂ ದತ್ತು ಸ್ವೀಕರಿಸಿ ಅಭಿಯಾನದ ಭಾಗವಾಗಿರುವ ಸ್ಲಂ ಯುವ ದೌಡ್ ನನ್ನು ಕ್ರೀಡಾ ಸಚಿವಾಲಯ ಮತ್ತು ನೆಹರು ಯುವ ಕೇಂದ್ರ ಸಂಘಟನೆ ಜಂಟಿಯಾಗಿ ಆಯೋಜಿಸಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೋಯಲ್ "ಯುವಕರನ್ನು ಒಂದೆಡೆ ಸೇರಿಸಿ ಅವರ ಕೌಶಲ್ಯ ಮತ್ತು ಐಡಿಯಾಗಳ ಬಗ್ಗೆ ತಿಳಿಯಲು ಇದು ನಮಗೆ ಸಹಕರಿಸುತ್ತದೆ. ಸ್ವಚ್ಛತೆ, ಡಿಜಿಟಲ್ ಇಂಡಿಯಾ ಮತ್ತು ಭೇಟಿ ಬಚಾವೋ ಆಂದೋಲನಗಳ ಭಾಗವಾಗಿ ಸ್ಲಂಗಳಲ್ಲಿ ಸಣ್ಣ ಉತ್ಸವಗಳನ್ನು ಆಯೋಜಿಸಲಿದ್ದೇವೆ" ಎಂದು ಹೇಳಿದ್ದಾರೆ.
"ನಮ್ಮ ಗುರಿ ಮಾದರಿ ಸ್ಲಂಗಳನ್ನು ಸೃಷ್ಟಿಸುವುದು ಮತ್ತು ಬದಲಾವಣೆಯ ಭಾಗವಾಗಿ ಅವರ ಸ್ಲಂ ಮತ್ತು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುವ ಯುವಕರ ಪಡೆಗಳನ್ನು ರಚಿಸುವುದು" ಎಂದು ಕೂಡ ಗೋಯಲ್ ಹೇಳಿದ್ದಾರೆ.
ಭಾನುವಾರ ಮೂರನೇ ಸ್ಲಂ ಯುವ ಮ್ಯಾರಥಾನ್ ಜರುಗಲಿದ್ದು ಇದಕ್ಕೆ ಕ್ರೀಡಾ ಸಚಿವರ ಜೊತೆಗೆ ಒಲಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಚಾಲನೆ ನೀಡಿದ್ದಾರೆ.