ಪ್ರೋ ಕಬಡ್ಡಿ ಲೀಗ್ ನಲ್ಲಿ ಪಾಕ್ ಆಟಗಾರರಿಗೆ ನೋ ಎಂಟ್ರಿ: ಕೇಂದ್ರ ಸರ್ಕಾರ
ಭಯೋತ್ಪಾದನೆಯನ್ನು ಉತ್ತೇಜಿಸುವ ಪಾಕಿಸ್ತಾನದ ಮನಸ್ಥಿತಿಯ ವಿರುದ್ಧ ಸರ್ಕಾರ ಕಠಿಣ ನಿಲುವು ತಳೆದಿದ್ದು, ಪಾಕ್ ಭಯೋತ್ಪಾದನೆಯನ್ನು ಬಿಡುವವರೆಗೂ ಅಲ್ಲಿನ ಆಟಗಾರರು ಪ್ರೋ ಕಬಡ್ಡಿ ಲೀಗ್ ನಲ್ಲಿ ಆಡುವುದಕ್ಕೆ...
ನವದೆಹಲಿ: ಭಯೋತ್ಪಾದನೆಯನ್ನು ಉತ್ತೇಜಿಸುವ ಪಾಕಿಸ್ತಾನದ ಮನಸ್ಥಿತಿಯ ವಿರುದ್ಧ ಭಾರತ ಸರ್ಕಾರ ಕಠಿಣ ನಿಲುವು ತಳೆದಿದ್ದು, ಪಾಕ್ ಭಯೋತ್ಪಾದನೆಯನ್ನು ಬಿಡುವವರೆಗೂ ಅಲ್ಲಿನ ಆಟಗಾರರು ಪ್ರೋ ಕಬಡ್ಡಿ ಲೀಗ್ ನಲ್ಲಿ ಆಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜೂ.25 ರಿಂದ ಕಬಡ್ಡಿ ಲೀಗ್ ನ 5 ನೇ ಸೆಷನ್ ಪ್ರಾರಂಭವಾಗಲಿದ್ದು, ಪಾಕಿಸ್ತಾನ ಉಗ್ರವಾದದಿಂದ ಮುಕ್ತಿ ಪಡೆಯುವವರೆಗೂ ನಾವು ಪಾಕಿಸ್ತಾನಿ ಆಟಗಾರರಿಗೆ ಕಬಡ್ಡಿ ಲೀಗ್ ನಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಹೇಳಿದ್ದಾರೆ.
ಪ್ರೋ ಕಬಡ್ಡಿ ಲೀಗ್ ನ ಆಯೋಜಕರು ಪಾಕಿಸ್ತಾನಿ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಪರಿಗಣಿಸಬಹುದು. ಆದರೆ ಆಯ್ಕೆಯಾದ ಪಾಕಿಸ್ತಾನಿ ಆಟಗಾರರು ಕಬಡ್ಡಿ ಲೀಗ್ ನಲ್ಲಿ ಆಡಬೇಕೋ ಬೇಡವೋ ಎಂಬುದನ್ನು ಭಾರತ ಸರ್ಕಾರ ಮಾತ್ರ ನಿರ್ಧರಿಸುತ್ತದೆ. ಎಲ್ಲಿಯವರೆಗೂ ಪಾಕಿಸ್ತಾನ ಭಯೋತ್ಪಾದನೆ ಬಿಡುವುದಿಲ್ಲವೋ ಅಲ್ಲಿಯವರೆಗೂ ಪಾಕಿಸ್ತಾನಿ ಆಟಗಾರರು ಭಾರತದ ನೆಲದಲ್ಲಿ ಆಡಲು ಬಿಡುವುದಿಲ್ಲ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಕಬಡ್ಡಿ ಲೀಗ್ ಮಾತ್ರವಲ್ಲದೇ, ಹಾಕಿ ಹಾಗೂ ಕ್ರಿಕೆಟ್ ಗಳಲ್ಲೂ ಸಹ ಪಾಕಿಸ್ತಾನಿ ಆಟಗಾರರಿಗೆ ಆಡಲು ಅವಕಾಶ ಮಾಡಿಕೊಟ್ಟಿಲ್ಲ. ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು, ಕುಲಭೂಷಣ್ ಜಾಧವ್ ಗೆ ಪಾಕ್ ಗಲ್ಲು ಶಿಕ್ಷೆ ವಿಧಿಸಿದ ನಂತರ ಇನ್ನೂ ಹದಗೆಟ್ಟಿದೆ.