ಒಂದೂರಿನ ಚಿಕ್ಕ ಗುಡಿಸಲಿನಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸಿಸುತ್ತಿದ್ದರು. ಮಗ ಕೂಲಿ ಮಾಡಿ ತಾಯಿಯನ್ನು ಸಾಕುತ್ತಿದ್ದ. ತಾಯಿಯೂ ಮನೆಗೆಲಸ ಮಾಡಿ ಅಷ್ಟಿಷ್ಟು ಸಂಪಾದಿಸುತ್ತಿದ್ದಳು. ಇಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಹೀಗಿರುವಾಗ ದುರದೃಷ್ಟವಶಾತ್ ತಾಯಿಯ ಆರೋಗ್ಯದಲ್ಲಿ ಏರುಪೇರಾಯಿತು. ಮಗ ವೈದ್ಯರಲ್ಲಿ ಕರೆದುಕೊಂಡು ಹೋದ. ತಾಯಿಯನ್ನು ತಪಾಸಣೆ ಮಾಡಿದ ವೈದ್ಯರು ಆಕೆಗೆ ಕುಷ್ಟರೋಗ ಇರುವುದಾಗಿ ತಿಳಿಸಿದರು. ಇದನ್ನು ಕೇಳಿದ ಮಗ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದರ ಬದಲು, ಆ ರೋಗವೆಲ್ಲಿ ತನಗೆ ಅಂಟಿಕೊಂಡುಬಿಡುತ್ತದೇನೋ ಎಂಬ ಭಯದಿಂದ ಹೆತ್ತ ತಾಯಿಯನ್ನೇ ಮನೆಯಿಂದ ಹೊರಹಾಕಿ ಮದುವೆಯಾಗಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದ.
ಆ ತಾಯಿ ದೂರದ ಯಾವುದೋ ಆಶ್ರಮ ಸೇರಿ ಚಿಕಿತ್ಸೆ ಪಡೆದು, ಅಲ್ಲೇ ಸೇವೆ ಮಾಡುತ್ತ ಇದ್ದುಬಿಟ್ಟಳು. ಆದರೆ ಆ ತಾಯಿಯ ಶಾಪವೋ ಏನೋ, ಕುಷ್ಟರೋಗ ಆಕೆಯ ಮಗನಿಗೂ ತಗುಲಿತು. ಆಗ ಭಯಗೊಂಡ ಆತನ ಹೆಂಡತಿ ಅವನನ್ನು ಬಿಟ್ಟು ತವರುಮನೆಗೆ ಹೊರಟುಹೋದಳು. ಊರಿನ ಜನರೂ ಆತನನ್ನು ಊರಿನಿಂದ ಹೊರಗಟ್ಟಿದರು. ಹೀಗೆ ಎಲ್ಲರಿಂದಲೂ ತಿರಸ್ಕೃತಗೊಂಡ ಆತ ಊರೂರು ಅಲೆಯುತ್ತಾ ತಾಯಿಯಿದ್ದ ಆಶ್ರಮದ ಬಳಿ ಬಂದು, ಅಲ್ಲಿ ತನ್ನ ತಾಯಿಯನ್ನು ಕಂಡು, ಪಶ್ಚಾತ್ತಾಪದಿಂದ ತಾಯಿಯ ಕಾಲಿಗೆರಗಿದ. ಹಿಂದಿನದನ್ನೆಲ್ಲ ಮರೆತ ತಾಯಿ ಮಗಲ ಶುಶ್ರೂಷೆ ಮಾಡಿದಳು. ತಾಯಿಯ ಪೋಷಣೆಯಲ್ಲಿ ಆತ ಗುಣಮುಖನಾಗಿ ಅದೇ ಆಶ್ರಮದಲ್ಲಿದ್ದು ಎಲ್ಲರ ಸೇವೆ ಮಾಡುತ್ತ ಕಾಲಕಳೆಯತೊಡಗಿದ.
ನೀತಿ: ತಾಯಿಯ ಪ್ರೀತಿ-ವಾತ್ಸಲ್ಯದ ಮುಂದೆ ಎಲ್ಲವೂ ನಗಣ್ಯ.
- ಬಿ. ಸೋಮಶೇಖರ್, ಸುರಪುರ
Advertisement