

ಬೆಂಗಳೂರು: ರಾಜ್ಯದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆಸಲಹೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ತಜ್ಞರು ರೂಪಾಂತರಿ ವೈರಸ್ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.
ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಕೋವಿಡ್'ನ ಹೊಸ ಎವೈ4.2 ತಳಿ ವೈರಸ್ ರಾಜ್ಯದಲ್ಲಿ ಪತ್ತೆಯಾಗಿದೆಯಾದರೂ ಸೋಂಕು ಹರಡಿಲ್ಲ ಹಾಗೂ ಅದರ ಪರಿಣಾಮ ಹೇಗಿರುತ್ತದೆ ಎಂಬುದು ದೃಢಪಟ್ಟಿಲ್ಲ. ಹಾಗಾಗಿ ಈ ತಳಿ ಮೇಲೆ ತಜ್ಞರ ಸಮಿತಿಗಳು ನಿಗಾವಹಿಸುವಂತೆ ಕೇಂದ್ರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಹೊಸ ತಳಿ ಪತ್ತೆಗೆ ಪರೀಕ್ಷೆಗಳನ್ನು ಹೆಚ್ಚಿಸಲು ಚರ್ಚೆ ನಡೆದಿವೆ ಎಂದು ತಿಳಿದುಬಂದಿದೆ.
ರೂಪಾಂತರಿ ವೈರಸ್ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಇದೀಗ ಎಲ್ಲಾ ಸರ್ಕಾರಿ ಅಧಿಕಾರಿಗಳು, ಧಾರ್ಮಿಕ ನಾಯಕರು, ಮಠದ ಶ್ರೀಗಳು ಹಾಗೂ ಸ್ಥಳೀಯ ರಾಜಕೀಯ ನಾಯಕರು ಲಸಿಕೆ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿರುವ ಕೆಲಸಗಳನ್ನು ಮಾಡಬೇಕೆಂದು ರಾಜ್ಯ ಸರ್ಕಾರ ಹೇಳಿದೆ.
ಎರಡನೇ ಡೋಸ್ ಅನ್ನು ನೀಡುವುದರ ಕುರಿತು ಗಮನಹರಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊಬೈಲ್ ಲಸಿಕೆ ಘಟಕವನ್ನು ಈಗಾಗಲೇ ಆರಂಭಿಸಲಾಗಿದೆ. ಇದು 'ಹರ್ ಘರ್ ದಸ್ತಕ್' ಯೋಜನೆಯಾಗಿದೆ, ಜನನಿಬಿಡ ಪ್ರದೇಶಗಳ ಬಳಿ ಆಂಬ್ಯುಲೆನ್ಸ್ ಅನ್ನು ನಿಲ್ಲಿಸಿ, ಆರೋಗ್ಯ ಕಾರ್ಯಕರ್ತರು ಪ್ರತಿ ಮನೆಯ ಬಾಗಿಲು ತಟ್ಟಿ ಜನರಿಗೆ ಲಸಿಕೆ ನೀಡುವ ಕೆಲಸ ಮಾಡಲಿದ್ದಾರೆ. ಇದನ್ನು ಆದ್ಯತೆಯ ಮೇಲೆ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗುತ್ತದೆ ಮತ್ತು ಇದು ಸರಿಯಾದ ಕಾರ್ಯತಂತ್ರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ರಂದೀಪ್ ಡಿ ಅವರು ಹೇಳಿದ್ದಾರೆ.
ಶೇ.50ರಷ್ಟು ಜನರು 2ನೇ ಡೋಸ್ ಲಸಿಕೆ ಪಡೆದುಕೊಳ್ಳದೆ ಇರುವುದು, ಇನ್ನೂ ಕೆಲ ಜಿಲ್ಲೆಗಳಲ್ಲಿ ಸಾಕಷ್ಟು ಜನರು ಮೊದಲ ಡೋಸ್ ಲಸಿಕೆಯನ್ನೇ ಪಡೆದುಕೊಂಡಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ. ಲಸಿಕೆ ಕುರಿತ ತಪ್ಪು ಮಾಹಿತಿಗಳೂ ಇದಕ್ಕೆ ಕಾರಣವಾಗಿರಬಹುದು. ಲಸಿಕೆ ಹಿಂಜರಿಕೆಯನ್ನು ದೂರಾಗಿಸಲು ಸಾಮಾಜಿಕ, ಧಾರ್ಮಿಕ ಹಾಗೂ ಇತರೆ ಸಂಸ್ಥೆಗಳ ಮೊರೆ ಹೋಗಬೇಕಿದೆ. ಮೈಕ್ರೋ ಪ್ಲಾನಿಂಗ್ ಕೂಡ ಮುಖ್ಯವಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರು ತಿಳಿಸಿದ್ದಾರೆ.
Advertisement