ನ್ಯೂ ಯಾರ್ಕ್: ೨೬/೧೧ ಮುಂಬೈ ಭಯೋತ್ಪಾದನಾ ದಾಳಿ "ಕೂದಲೆಳೆಯ ಭದ್ರತಾ ಗುಪ್ತಚರ ಕಾರ್ಯಾಚರಣೆಯ ವೈಫಲ್ಯದಿಂದ ನಡೆದ ವಿಧ್ವಂಸಕ ಕೃತ್ಯ" ಎನ್ನುತ್ತದೆ ಹೊಸ ತನಿಖಾ ವರದಿ. ಯು ಎಸ್, ಬ್ರಿಟಿಷ್ ಮತ್ತು ಭಾರತೀಯ ಗುಪ್ತಚರ ಇಲಾಖೆಗಳು ಸಂಗ್ರಹಿಸಿದ ಮಾಹಿತಿಗಳನ್ನು ಒಟ್ಟಿಗೆ ಕಲೆ ಹಾಕುವುದರ ವೈಫಲ್ಯದಿಂದ ಈ ದಾಳಿ ಸಾಧ್ಯವಾಗಿದೆ ಎನ್ನುತ್ತದೆ ವರದಿ.
ಅಮೇರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ತನಿಖಾ ವರದಿ ಹೇಳುವಂತೆ ಇದು "ಗುಪ್ತಚರ ಮಾಹಿತಿಯ ರಾಶಿ ಆದರೆ ಬಿಡಿಸಲಾರದ ಒಗಟು" ಎಂದಿರುವ ಪತ್ರಿಕೆ ಮುಂಬೈ ಭಯೋತ್ಪಾದನಾ ದಾಳಿ ಭದ್ರತಾ ಪಡೆಗಳ ದೌರ್ಬಲ್ಯವನ್ನೂ ತೋರಿಸುತ್ತದೆ ಹಾಗೆಯೇ ಹೈ ಟೆಕ್ ಕಂಪ್ಯೂಟರ್ ಗಳು ಸಂಗ್ರಹಿಸಬಹುದಾದ ಮಾಹಿತಿ ಹೇಗೆ ಭಯೋತ್ಪಾದನ ನಿಗ್ರಹಕ್ಕೆ ಆಯುಧವಾಗಿ ಬಳಸಬಹುದು ಎಂಬುದನ್ನೂ ತೋರಿಸುತ್ತದೆ ಎನ್ನುತ್ತದೆ.
ಎದ್ದು ಕಾಣುವ ಭದ್ರತಾ ವೈಫಲ್ಯವೊಂದನ್ನು ಎತ್ತಿ ಹಿಡಿದಿರುವ ಈ ತನಿಖೆ, ೨೬/೧೧ ದಾಳಿಯ ಪ್ರಮುಖ ಆಯೋಜಕ ಲಷ್ಕರ್ ಎ ತೈಬಾ ದ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಜರ್ರಾರ್ ಷಾ ನ ಅಂತರ್ಜಾಲ ಚಟುವಟಿಕೆಗಳನ್ನು ಭಾರತೀಯ ಹಾಗು ಬ್ರಿಟಿಷ್ ಗುಪ್ತಚರ ದಳಗಳು ಗಮನಿಸಿದ್ದವು ಆದರೆ ಚುಕ್ಕಿಗಳನ್ನು ಜೋಡಿಸಲು ವಿಫಲವಾದವು ಎಂದಿದೆ.
Advertisement