ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದ್ದು, ಅಧ್ಯಕ್ಷರ ಹುದ್ದೆಗೆ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್ ನಾಯಕ ವಿ.ಆರ್.ಸುದರ್ಶನ್ ಅವರ ಹೆಸರನ್ನು ಬುಧವಾರ ಶಿಫಾರಸು ಮಾಡಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿ.ಆರ್.ಸುದರ್ಶನ್ ಅವರ ಹೆಸರನ್ನು ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಕಳುಹಿಸಿಕೊಟ್ಟಿದೆ.
ಕೆಳೆದ ಒಂದುವರೆ ವರ್ಷದಿಂದ ಖಾಲಿ ಇದ್ದ ಕೆಪಿಎಸ್ಸಿ ಅಧ್ಯಕ್ಷ ಹುದ್ದೆಗೆ ಮೈಸೂರಿನ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಹೆಸರು ಸೇರಿದಂತೆ, ಬಿಡಿಎ ಆಯುಕ್ತ ಶ್ಯಾಂ ಭಟ್, ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿ ಕೆ.ಆರ್.ಶ್ರೀನಿವಾಸ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದವು. ಆದರೆ ಅಂತಿಮವಾಗಿ ರಾಜ್ಯ ಸರ್ಕಾರ ಸುದರ್ಶನ್ ಅವರ ಹೆಸರನ್ನು ಶಿಫಾರಸು ಮಾಡಿದೆ.
ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಗೋನಾಲ್ ಭೀಮಪ್ಪ ಅವರು 2013ರಲ್ಲಿ ನಿವೃತ್ತಿಯಾಗಿದ್ದರು. ಅವರ ನಿವೃತ್ತಿ ನಂತರ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಹಗರಣ ಬಯಲಿಗೆ ಬಂದಿತ್ತು. ಇದಾದ ಬಳಿಕ ಸರ್ಕಾರ ಕೆಪಿಎಸ್ಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ.
Advertisement