ನವದೆಹಲಿ: ಸಂಬಳದಾರರಿಗೆ ಮತ್ತು ಮಧ್ಯಮ ವರ್ಗಕ್ಕೆ ಹೆಚ್ಚಿನ ತೆರಿಗೆ ಹಾಕಿ ಅವರಿಗೆ ಹೆಚ್ಚಿನ ಹೊರೆಯಾಗುವುದರಲ್ಲಿ ನನಗೆ ಇಷ್ಟವಿಲ್ಲ ಬದಲಾಗಿ ತೆರಿಗೆ ವಂಚಿಸುವವರ ಹಿಂದೆ ಹೋಗಲಿದ್ದೇನೆ ಎಂದಿದ್ದಾರೆ ಕೆಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.
ಈ ನಡೆಯಿಂದ ತೆರಿಗೆ ಕಟ್ಟುವವರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಿ, ಅವರು ಅದನ್ನು ವ್ಯಯಿಸಿದಾಗ ಪರೋಕ್ಷ ತೆರಿಗೆಯನ್ನು ಸಂಗ್ರಹಿಸಲು ಅನುವಾಗುತ್ತದೆ ಎಂದಿದ್ದಾರೆ.
"ಇಂದು ಸರ್ಕಾರ ಸಂಗ್ರಹಿಸುವ ಸುಮಾರು ಅರ್ಧದಷ್ಟು ತೆರಿಗೆ ಪರೋಕ್ಷ ತೆರಿಗೆ. ಆಮದು ಸುಂಕ, ಅಬಕಾರಿ ಸುಂಕ ಇತ್ಯಾದಿ ಮಾರ್ಗಗಳಲ್ಲಿ ಇಂದು ತೆರಿಗೆ ಸಂಗ್ರಹವಾಗುತ್ತಿದೆ. ಆದಾಯ ತೆರಿಗೆ ಕುರಿತಂತೆ, ಈಗ ತೆರಿಗೆಯನ್ನು ವಂಚಿಸುವವರನ್ನು ತೆರಿಗೆ ಕಟ್ಟುವಂತೆ ಮಾಡುವುದೇ ತೆರಿಗೆ ಜಾಲವನ್ನು ವಿಸ್ತರಿಸಿದಂತಾಗುತ್ತದೆ" ಎಂದಿದ್ದಾರೆ ಜೇಟ್ಲಿ.
"ಇಂದು 35 ಸಾವಿರದಿಂದ ೪೦ ಸಾವಿರ ಗಳುಹಿಸುವವನು ಸ್ವಲ ಉಳಿತಾಯ ಮಾಡಿದರೆ ಯಾವ ತೆರಿಗೆಯನ್ನೂ ಕಟ್ಟುವಂತಿಲ್ಲ. ಆದರೆ ಇಂದಿನ ನಿತ್ಯಜೀವನದ ದುಬಾರಿ ವ್ಯಯ, ಸಾಗಾಣೆ ವೆಚ್ಚ, ಮಕ್ಕಳ ಶಾಲಾ ಶುಲ್ಕ ಇವುಗಳಿಂದ ಉಳಿತಾಯ ಮಾಡಲು ಸಾಧ್ಯವೇ ಇಲ್ಲ ಎನ್ನುತಾರೆ ಮಧ್ಯಮ ವರ್ಗದ ಜನ" ಎಂದು ಕೂಡ ಜೇಟ್ಲಿ ಹೇಳಿದ್ದಾರೆ.
ಆದುದರಿಂದ ತೆರಿಗೆ ಜಾಲವನ್ನು ವಿಸ್ತರಿಸಲು, ತೆರಿಗೆ ವಿನಾಯಿತಿ ಕಡಿಮೆ ಮಾಡಿದರೆ ಪ್ರಯೋಜನವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಜೇಟ್ಲಿ "ಸರ್ಕಾರದ ಖಜಾನೆಯಲ್ಲಿ ಜಾಸ್ತಿ ಹಣವಿದ್ದರೆ, ಈ ವಿನಾಯಿತಿಯನ್ನು ಹೆಚ್ಚಿಗೆ ಮಾಡಬೇಕು. ಆದರೆ ಹಣಕಾಸು ಸ್ಥಿತಿ ದೊಡ್ಡ ಸವಾಲಾಗಿದೆ" ಎಂದಿದ್ದಾರೆ.
ದೇಶದಲ್ಲಿರುವ ಕಪ್ಪು ಹಣದ ಬೆಗ್ಗೆ ಕೇಳಿದ ಪ್ರಶ್ನೆಗೆ "ಇದು ದೊಡ್ಡ ಪ್ರಮಾಣದಲ್ಲಿದೆ ಆದರೆ ಸುಲಭವಾಗಿ ಪತ್ತೆ ಹಚ್ಚಬಲ್ಲದ್ದಾಗಿದೆ. ಏಕೆಂದರೆ ರಿಯಲ್ ಎಸ್ಟೇಟ್ ಗೆ ಹೋಗಿ, ಜಮೀನಿಗೆ ಹೋಗಿ, ಗಣಿಗೆಗಾರಿಕೆಗೆ ಹೋಗಿ, ಒಡವೆಗೆ ಹೋಗಿ, ವಿಲಾಸಿ ವಸ್ತುಗಳಿಗೆ ಹೋಗಿ, ಎಲ್ಲ ಕಡೆಯೂ ಕಪ್ಪು ಹಣ ಕಾಣಸಿಗುತ್ತದೆ. ಶೈಕ್ಷಣಿಕ ಸಂಸ್ಥೆಗಳಿಗೆ ಹೋಗಿ ಅಲ್ಲಿಯೂ ಸಿಗುತ್ತದೆ. ಕೊಳ್ಳುವವರನ್ನು ಕಂದು ಹಿಡಿದರೆ ಸಾಕು, ಕಪ್ಪು ಹಣ ಸ್ವೀಕರಿಸುವವರನ್ನೂ ಪತ್ತೆ ಹಚ್ಚಬಹುದು" ಎಂದಿದ್ದಾರೆ ವಿತ್ತ ಸಚಿವರು.
Advertisement