ಬೆಂಗಳೂರು: ಸರ್ಕಾರ ನೀಡುವ ಹಣವನ್ನು ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ(ಕೆಸಿಡಿಸಿ) ಸದುಪಯೋಗ ಪಡಿಸಿಕೊಳ್ಳದೆ ಪೋಲು ಮಾಡುತ್ತಿದೆ. ಕಾಂಪೋಸ್ಟ್ ಅಭಿವೃದ್ಧಿ ನಿಗಮ ತಮ್ಮ ಕೆಲಸ ಮಾಡಲು ಆಗದಿದ್ದಲ್ಲಿ ಮುಖ್ಯಮಂತ್ರಿಗೆ ತಿಳಿಸಿ ಅದನ್ನು ಸೂಪರ್ ಸೀಡ್ ಮಾಡಿ ಎಂದು ಹೈಕೋರ್ಟ್ ಮೌಖಿಕವಾಗಿ ಸೂಚಿಸಿದೆ.
ನಗರದ ಎಚ್ಎಸ್ಆರ್ ಬಡಾವಣೆಯಲ್ಲಿ ಕೆಸಿಡಿಸಿಯ ತನ್ನ ಘಟಕಕ್ಕೆ ಹಸಿ ತ್ಯಾಜ್ಯದ ಸರಬರಾಜು ಸ್ಥಗಿತಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿಗಮದ ಅಧ್ಯಕ್ಷ ಡಾ.ಆನಂದ್ ಕುಮಾರ್ ಪತ್ರ ಬರೆದಿದ್ದರು. ಅಧ್ಯಕ್ಷರ ಕ್ರಮದ ಬಗ್ಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ಸಂಬಂಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ನಗರದಲ್ಲಿನ ಕಸದ ಸಮಸ್ಯೆಗೆ ಸಂಬಂಧಿಸಿದಂತೆ ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.ವಿ.ನಾಗರತ್ನ ವಿಭಾಗೀಯ ಪೀಠ, `ಕೆಸಿಡಿಸಿಯಲ್ಲಿ ಶೇಖರಣೆ ಆಗುವ ತ್ಯಾಜ್ಯ ಸಂಸ್ಕರಣೆ ಮಾಡುವುದಕ್ಕೆ ನೆರವಾಗುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಬೇಕು.
ಆದರೆ, ಅದರ ಬದಲಾಗಿ ತನ್ನ ಘಟಕ್ಕೆ ಕಸವನ್ನು ಸಾಗಣೆ ಮಾಡುವುದನ್ನು ಸ್ಥಗಿತಗೊಳಿಸಿ' ಎಂದು ಪಾಲಿಕೆಗೆ ತಿಳಿಸಿದೆ. ಈಗಾಗಲೇ ಕೆಸಿಡಿಸಿ ಬಳಿ 50 ಸಾವಿರ ಟನ್ನಷ್ಟು ತ್ಯಾಜ್ಯವಿದೆ. ಅದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಒಂದು ವರ್ಷ ಅವಧಿ ಬೇಕಾಗುತ್ತದೆ. ಈಗಿರುವ ತ್ಯಾಜ್ಯವನ್ನು ಸಂಸ್ಕರಿಸಿ ರಸಗೊಬ್ಬರ ಉತ್ಪಾದನೆ ಮಾಡಿದ ನಂತರವೇ ಬಿಬಿಎಂಪಿಯಿಂದ ತ್ಯಾಜ್ಯ ಸಂಗ್ರಹಿಸಲು ಸಾಧ್ಯ. ಹೀಗಾಗಿ ತಕ್ಷಣಕ್ಕೆ ಜಾರಿ ಬರುವಂತೆ ಬಿಬಿಎಂಪಿಯಿಂದ ತ್ಯಾಜ್ಯ ಸಂಗ್ರಹಿಸುವುದನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಸಿಡಿಸಿ ಹೈಕೋರ್ಟ್ಗೆ ತಿಳಿಸಿತ್ತು.
Advertisement