ನವದೆಹಲಿ: ಚತ್ತೀಸ್ ಘರ್ ನ ಇತ್ತೀಚಿನ ನಕ್ಸಲ್ ದಾಳಿಗೆ ಆಹುತಿಯಾದ ಭದ್ರತಾ ಪಡೆ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅವರಿಗೆ ದೊರಕುತ್ತಿದ್ದ ಸೌಲಭ್ಯಗಳನ್ನು ಕುಟುಂಬದವರಿಗೆ ವಿಸ್ತರಿಸುವುದಾಗಿ ತಿಳಿಸಿದೆ.
"ಆವರಿಗೆ ಶೌರ್ಯ ಪ್ರಶಸ್ತಿ ನೀಡಲು ನಾವು ನಿರ್ಧರಿಸಿದ್ದೇವೆ. ಹಾಗೆಯೆ ಅವರಿಗೆ ದೊರೆಯುತ್ತಿದ್ದ ಇತರ ಸೌಲಭ್ಯಗಳನ್ನು ಕುಟುಂಬ ಸದಸ್ಯರಿಗೂ ನೀಡಲಿದ್ದೇವೆ. ಅದರ ಸಲುವಾಗಿ ಸರಿಯಾದ ಘೋಷಣೆಗಳನ್ನು ಶೀಘ್ರದಲ್ಲೇ ಮಾಡಲಿದ್ದೇವೆ" ಎಂದು ಗೃಹ ಸಚಿವ ರಾಜನಾಥ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.
ಚತ್ತೀಸ್ ಘರ್ ನಲ್ಲಿ ನಕ್ಸಲರಿಗೆ ಬಲಿಯಾದ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಿದ ಅವರು "ತಮ್ಮ ಜೀವನವನ್ನೇ ತ್ಯಾಗ ಮಾಡಿದ ಜವಾನರ ಶೌರ್ಯಕ್ಕೆ ನನ್ನ ನಮಸ್ಕಾರ" ಎಂದಿದ್ದಾರೆ.
ಚತ್ತೀಸ್ ಘರ್ ನ ಕಾಂಕೆರ್ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಒಬ್ಬ ಬಿ ಎಸ್ ಎಫ್ ಯೋಧ ಮೃತಪಟ್ಟು, ೧೨ ಜನ ಗಾಯಗೊಂಡಿದ್ದರು. ಕಳೆದ ಎರಡು ದಿನಗಳಿಂದ ನಕ್ಸಲರು ನಡೆಸಿರುವ ನಾಲ್ಕನೇ ದಾಳಿ ಇದು.
Advertisement