ನವದೆಹಲಿ: ಭಿನ್ನಮತೀಯ ನಾಯಕರಾದ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪದ ಮೇಲೆ ಆಮ್ ಆದ್ಮಿ ಪಕ್ಷ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿದೆ. ಈ ನಡೆ ಸ್ವಾಭಾವಿಕ ನ್ಯಾಯದ ವಿರುದ್ಧ ಎಂದು ಯಾದವ್ ಪ್ರಶ್ನಿಸಿದ್ದರು, ಇಬ್ಬರನ್ನು ಪಕ್ಷದಿಂದ ಉಚ್ಛಾಟಿಸಲು ಇದು ಕೊನೆಯ ನಡೆ ಎನ್ನಲಾಗಿದೆ.
ಯಾದವ್, ಭೂಷಣ್, ಆನಂದ್ ಕುಮಾರ್ ಮತ್ತು ಅಜಿತ್ ಝಾ ಇವರುಗಳಿಗೆ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಎಪಿ ವಕ್ತಾರ ದೀಪಕ್ ಬಾಜಪಾಯಿ ತಿಳಿಸಿದ್ದಾರೆ. ಇವರುಗಳ ವಿರುದ್ಧ ಇರುವ ಆರೋಪಗಳನ್ನು ಸಾಕ್ಷಿ ಸಮೇತ ಪಟ್ಟಿ ಮಾಡಿದ ಅವರು "ಎರಡು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಅವರಿಗೆ ಹೇಳಿದ್ದೇವೆ. ಇಮೇಲ್ ಪ್ರತಿಗಳನ್ನು ಅವರಿಗೆ ಕಳುಹಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಆದರೆ ಭಿನ್ನಮತೀಯ ನಾಯಕರು ನಮಗೆ ಇನ್ನೂ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ.
ಈ ಭಿನ್ನಮತೀಯ ನಾಯಕರು 'ಸ್ವರಾಜ್ ಸಂವಾದ' ಕಾರ್ಯಕ್ರಮವನ್ನು ಆಯೋಜಿಸಿದ್ದ ಮೇಲೆ ಈ ಪ್ರಕರಣವನ್ನು ಪಕ್ಷ ರಾಷ್ಟ್ರೀಯ ಶಿಸ್ತು ಸಮಿತಿಗೆ ಪಕ್ಷ ಸೂಚಿಸಿತ್ತು.
ನಮ್ಮ ಮೇಲೆ ಆರೋಪ ಮಾಡಿರುವವರೆಲ್ಲರೂ ಶಿಸ್ತು ಸಮಿತಿಯ ಸದಸ್ಯರು ಆದುದರಿಂದ ಈ ನಡೆ ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧ ಎಂದು ಯೋಗೆಂದ್ರ ಯಾದವ್ ಪ್ರಶ್ನಿಸಿದ್ದಾರೆ.
Advertisement