ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನಿನ್ನೆ ಜಮ್ಮು ಮತ್ತು ಕಾಶ್ಮೀರದ ಉಧಾಂಪುರದಲ್ಲಿ ಬಿಎಸ್ಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಜೀವಂತವಾಗಿ ಸೆರೆ ಸಿಕ್ಕ ಪಾಕ್ ಉಗ್ರ ಮೊಹಮ್ಮದ್ ನಾವೇದ್ನ ವಿಚಾರಣೆಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದೆ.
ಇನ್ನು ಈ ಬಗ್ಗೆ ಗುರುವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿರುವ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಉಧಾಂಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಯೋಧರಿಗೆ ಪ್ರಶಸ್ತಿ ನೀಡುವ ಚಿಂತನೆ ಇದೆ ಎಂದರು.
ದಾಳಿ ಮಾಡಿದ ಇಬ್ಬರು ಉಗ್ರರ ಪೈಕಿ ಓರ್ವನನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದು, ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದೆ. ಬಂಧಿತ ಉಗ್ರ ಮೊಹಮ್ಮದ್ ನಾವೇದ್ ಅಲಿಯಾಸ್ ಉಸ್ಮಾನ್ ಎಂದು ಗುರುತಿಸಲಾಗಿದೆ ಎಂದರು.
ವಿಚಾರಣೆ ವೇಳೆ ಸೆರೆ ಸಿಕ್ಕ ಉಗ್ರ ತಾನು ಪಾಕಿಸ್ತಾನದ ಫೈಸಲಾಬಾದ್ನ ನಿವಾಸಿ ಎಂದು ಹೇಳಿಕೊಂಡಿರುವುದಾಗಿ ರಾಜನಾಥ್ ಸಿಂಗ್ ರಾಜ್ಯಸಭೆಗೆ ತಿಳಿಸಿದರು. ಇನ್ನು ಇದೇ ವೇಳೆ ಗಡಿ ಗ್ರಾಮಗಳಲ್ಲಿರುವ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
Advertisement