ಜಮ್ಮು: ಜಮ್ಮು ಕಾಶ್ಮೀರದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಜಮ್ಮುವಿನ ಪೂಂಚ್ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ನಡೆಸಿರುವ ಶೆಲ್ ದಾಳಿಯ ಬಗ್ಗೆ ಪ್ರಧಾನಿಯವರ ಮೌನವನ್ನು ಪ್ರಶ್ನಿಸಿದ್ದು, ದಾಳಿಗೆ ಸರಿಯಾದ ಪ್ರತಿಕ್ರಿಯೆ ನೀಡುವಂತೆ ಆಗ್ರಹಿಸಿದ್ದಾರೆ.
ಆಗಸ್ಟ್ ೧೫ ಮತ್ತು ೧೬ ರಂದು ನಡೆದ ಪಾಕಿಸ್ತಾನ ದಾಳಿಯಲ್ಲಿ ಆರು ನಾಗರಿಕರು ಮೃತಪಟ್ಟಿದ್ದರು. ಈ ದಾಳಿಯನ್ನು ಖಂಡಿಸಿರುವ ಪಕ್ಷ, ನೆರೆ ರಾಷ್ಟ್ರ ಮಾತುಕತೆ ಮತ್ತು ಬಂದೂಕು ಎರಡಕ್ಕೂ ಆಹ್ವಾನ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದೆ.
"ಪಾಕಿಸ್ತಾನದ ಪ್ರಧಾನಿ ಮೋದಿಯವರಿಗೆ ಒಳ್ಳೆಯ ಬಾಂಧವ್ಯ ಬಯಸಿ ಶುಭ ಸಂದೇಶ ಕಳುಹಿಸುತ್ತಾರೆ ಅದೇ ಸಮಯದಲ್ಲಿ ಶೆಲ್ ದಾಳಿ ನಡೆಸುತ್ತಾರೆ. ಇದು ದುಖದ ವಿಷಯ.
"ಪಾಕಿಸ್ತಾನ ಯಾರನ್ನು ಪೆದ್ದು ಮಾಡಲು ಹೊರಟಿದೆ ಮತ್ತು ನಮ್ಮ ಪ್ರಧಾನಿ ಮೌನಕ್ಕೆ ಶರಣಾಗಿದ್ದಾರೆ. ಅವರು ಮೌನವಾಗಿರಲು ಸಂಕಲ್ಪ ಮಾಡಿದ್ದಾರೆ" ಎಂದು ಮಾಜಿ ಸಚಿವ ಮತ್ತು ಜಮ್ಮು ಕಾಶ್ಮೀರದ ಎನ್ ಸಿ ಪಿ ಪಕ್ಷದ ಅಧ್ಯಕ್ಷ ಠಾಕೂರ್ ರಣಧೀರ್ ಸಿಂಗ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಸೇನೆ ಒಂದೇ ರಾತ್ರಿ ಎರಡು ಬಾರಿ ಕದನ ವಿರಾಮ ಉಲ್ಲಂಗಿಸಿ ಪೂಂಚ್ ಜಿಲ್ಲೆಯ ಗಡಿಯಲ್ಲಿ ೧೨೦ ಎಂಎಂ ಮತ್ತು ೮೨ ಎಂಎಂ ಮಾರ್ಟರ್ ಬಾಂಬ್ ದಾಳಿ ನಡೆಸಿತ್ತು. ಇದರಿಂದ ೬ ಜನ ಸಾವನ್ನಪ್ಪಿ, ೧೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಆಗಸ್ಟ್ ನಲ್ಲೇ ಪಾಕಿಸ್ತಾನ ೪೦ ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಈ ವರ್ಷ ಗಡಿ ನಿಯಂತ್ರಣ ರೇಖೆಯಲ್ಲಿ ೨೩೦ ಬಾರಿ ಪಾಕಿಸ್ತಾನ ಕದಮ ವಿರಾಮ ಉಲ್ಲಂಘಿಸಿದೆ.
Advertisement