ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಸೈಕಲ್ ಕಾರ್ಖಾನೆಗಾಗಿ ಮೀಸಲಿಟ್ಟಿದ್ದ ಜಮೀನನ್ನು ಗಾಂಧಿ ಕುಟುಂಬ ನಡೆಸುವ ಟ್ರಸ್ಟ್ ಗೆ ಮಾರಲಾಗಿದೆ ಎಂಬ ಆರೋಪವನ್ನು ಎತ್ತಿದ್ದಾರೆ. ಆದರೆ ಇದು ಊಹಾಪೋಹ ಮತ್ತು ಆಧಾರರಹಿತ ಎಂದು ಕಾಂಗ್ರೆಸ್ ಈ ಆರೋಪವನ್ನು ತಳ್ಳಿ ಹಾಕಿದೆ.
ಕಾಂಗ್ರೆಸ್ ಪಕ್ಷದ ತವರು ಕ್ಷೇತ್ರ ಅಮೇಥಿಯಲ್ಲೆ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಇರಾನಿ ರಾಹುಲ್ ಗಾಂಧಿ ಸುಳ್ಳುಗಾರ ಎಂದಿದ್ದಲ್ಲದೆ, ಅಮೇಥಿ ಅಭಿವೃದ್ಧಿಗೆ ನೀಡಿದ ವಚನವನ್ನು ಪಾಲಿಸಲು ಸೋತಿದ್ದಾರೆ ಎಂದು ಕೂಡ ಹೇಳಿದ್ದಾರೆ. ಸಾಮ್ರಾಟ್ ಬೈಸಿಕಲ್ ಕಾರ್ಖಾನೆ ಸ್ಥಾಪಿಸಲು ರೈತರಿಂದ ಅತಿ ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ೬೫ ಎಕರೆ ಜಮೀನನ್ನು ರಾಜೀವ್ ಗಾಂಧಿ ಚಾರಿಟೆಬಲ್ ಟ್ರಸ್ಟ್ ಗೆ ಫೆಬ್ರವರಿ ೨೪ರಂದು ಮಾರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
"ನರೇಂದ್ರ ಮೋದಿ ಸುಳ್ಳುಗಾರರಲ್ಲ ಆದರೆ ರಾಹುಲ್ ಗಾಂಧಿ. ಅಮೇಥಿಯಲ್ಲಿ ರೈತರ ೬೫ ಎಕರೆ ಕೃಷಿ ಭೂಮಿಯನ್ನು ಕಬಳಿಸಿರುವುದೇ ಅದಕ್ಕೆ ಸಾಕ್ಷಿ. ೮೦ ರಲ್ಲಿ ಕಾರ್ಖಾನೆ (ಬೈಸಿಕಲ್) ಸ್ಥಾಪಿಸಲು ರೈತರ ೬೫ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಎಲ್ಲಿ ಕಾರ್ಖಾನೆ ತಲೆಯೆತ್ತಿದೆಯೇ? ಯಾರಿಗಾದರೂ ಉದ್ಯೋಗ ದೊರೆತಿದೆಯೇ? ಆ ಜಮೀನಿಗೆ ಏನಾಯಿತು? ಆ ಜಮೀನನ್ನು ಉತ್ತರಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪಾಲಿಕೆಗೆ ಹಿಂದಿರುಗಿಸಬೇಕು" ಎಂದು ಇರಾನಿ ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ರೈತರ ಒಂದು ಇಂಚು ಜಾಗವನ್ನು ಯಾರೂ ತೆಗೆದುಕೊಳ್ಳಲು ಬಿಡುವುದಿಲ್ಲ ಎನ್ನುತ್ತಿದ್ದಾರೆ, ಬಹುಶಃ ಅದರ ಅರ್ಥ ಎಲ್ಲ ಜಮೀನು ಅವರಿಗೇ ಬೇಕು ಎಂದಿರಬೇಕು ಎಂದು ಅವರು ಕುಹಕವಾಡಿದ್ದಾರೆ.
ಇರಾನಿ ಅವರ ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ "ಸಾಮ್ರಾಟ್ ಸೈಕಲ್ ಜಮೀನನ್ನು ಮುಚ್ಚಲಾಗಿತ್ತು ಮತ್ತು ಅದಕ್ಕೆ ಸೇರಿದ್ದ ಜಮೀನನ್ನು ಹರಾಜು ಮಾಡಲಾಗಿತ್ತು, ರಾಜೀವ್ ಗಾಂಧಿ ಟ್ರಸ್ಟ್ ಅದನ್ನು ಕೋರ್ಟ್ ಆದೇಶದಂತೆ ಪಾರದರ್ಶಕ ರೀತಿಯಲ್ಲಿ ಪಡೆದುಕೊಂಡಿತು" ಎಂದು ಹೇಳಿದ್ದಾರೆ.
Advertisement