ನಾಳೆ ದೇಶವ್ಯಾಪಿ ಮುಷ್ಕರ: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬೆಂಬಲ, ಆಟೋ ಸಹ ಇರಲ್ಲ

ದೇಶದ 10 ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ದೇಶವ್ಯಾಪಿ ಬೃಹತ್‌ ಮುಷ್ಕರಕ್ಕೆ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ನೌಕರರು ಬೆಂಬಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದ 10 ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ದೇಶವ್ಯಾಪಿ ಬೃಹತ್‌ ಮುಷ್ಕರಕ್ಕೆ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ನೌಕರರು ಬೆಂಬಲ ಸೂಚಿಸಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ರಸ್ತೆ ಸಾರಿಗೆ ಮತ್ತು ಸುರಕ್ಷತೆ ಮಸೂದೆ 2015 ಅನ್ನು ವಿರೋಧಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಈ ಮಸೂದೆ ಕಾರ್ಮಿಕ ವಿರೋಧಿಯಾಗಿದ್ದು, ಇದರಿಂದ ರಾಜ್ಯ ಸಾರಿಗೆ ಸಂಸ್ಥೆಗಳು ದುರ್ಬಲವಾಗಲಿವೆ ಎಂದಿದ್ದಾರೆ.

ಸಾರಿಗೆ ಸಂಸ್ಥೆಗಳ ಕಾರ್ಮಿಕರು, ಭಾರತೀಯ ರೇಲ್ವೆ ನೌಕರರ ಒಕ್ಕೂಟ ಹಾಗೂ ಇತರೆ ಕಾರ್ಮಿಕ ಸಂಘಟೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಕೆಎಸ್ಆರ್ ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬ ರಾವ್ ಅವರು ತಿಳಿಸಿದ್ದಾರೆ.

ನಾಳಿನ ಮುಷ್ಕರದಲ್ಲಿ ಆಟೋ ಚಾಲಕರು ಭಾಗವಹಿಸುತ್ತಿದ್ದು, ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಯಾವುದೇ ಆಟೋಗಳು ರಸ್ತೆಗಿಳಿಯುವುದಿಲ್ಲ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಸಿ.ಟಿ.ಲೋಕೇಶ್ ಅವರು ಹೇಳಿದ್ದಾರೆ.

ಈ ಮುಷ್ಕರದಿಂದಾಗಿ ಸಾರಿಗೆ, ಬ್ಯಾಂಕು, ವಿಮೆ, ಅಂಚೆ ಹಾಗೂ ಕೈಗಾರಿಕಾ ವಲಯಗಳಲ್ಲಿ ಭಾರಿ ತೊಂದರೆಯಾಗುವ ಸಾಧ್ಯತೆ ಇದೆ. ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನ, ಪಂಜಾಬ್‌ ಮತ್ತಿತರೆ ರಾಜ್ಯಗಳಲ್ಲಿ ಸಾರಿಗೆ ಸೇವೆ ಸಂಪೂರ್ಣ ಬಂದ್‌ ಆಗಲಿದೆ ಎಂದು ಕಾರ್ಮಿಕ ನಾಯಕರು ತಿಳಿಸಿದ್ದಾರೆ. ಕಾರ್ಮಿಕ ಕಾನೂನಿಗೆ ಸಂಬಂಧಿಸಿದ ಬೇಡಿಕೆಗಳನ್ನು ಇಟ್ಟುಕೊಂಡು ಕಾರ್ಮಿಕ ಸಂಘಟನೆಗಳು 2009ರಿಂದಲೂ ಹೋರಾಟ ಮಾಡಿಕೊಂಡು ಬಂದಿವೆ. 2010ರಲ್ಲಿ ಒಂದು ದಿನ ಹಾಗೂ 2013ರಲ್ಲಿ ಎರಡು ದಿನ ದೇಶವ್ಯಾಪಿ ಮುಷ್ಕರ ನಡೆಸಿದ್ದವು. 10 ಕೋಟಿ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com