ಅಲಬಾಮಾ: ಕೆಲವು ದಿನಗಳ ಹಿಂದೆ ಅಲಬಾಮಾದಲ್ಲಿ 57 ವರ್ಷ ಪ್ರಾಯದ ಗುಜರಾತ್ ಮೂಲದ ಸುರೇಶ್ ಭಾಯಿ ಪಟೇಲ್ ಎಂಬ ವ್ಯಕ್ತಿಯನ್ನು ಅನಾವಶ್ಯಕವಾಗಿ ಹೊಡೆದು ಆಂಶಿಕ ಪಾರ್ಶ್ವವಾಯುವಿಗೆ ಗುರಿ ಮಾಡಿ ಗಂಭೀರ ಸ್ಥಿತಿಗೆ ತಳ್ಳಿರುವ ಘಟನೆಯ ಬಗ್ಗೆ ಅಲಬಾಮಾ ಗವರ್ನರ್ ರಾಬರ್ಟ್ ಬೆನ್ಟ್ಲೀ ವಿಶಾದ ವ್ಯಕ್ತ ಪಡಿಸಿ ಕ್ಷಮೆ ಕೋರಿದ್ದಾರೆ.
ಭಾರತದ ವಾಣಿಜ್ಯ ದೂತಾಧಿಕಾರಿ ಅಜಿತ್ ಕುಮಾರ್ ಅವರಿಗೆ ಬೆನ್ಟ್ಲೀ ಪತ್ರ ಬರೆದಿದ್ದು, ಸುರೇಶ್ ಭಾಯಿ ಅವರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಬೆನ್ಟ್ಲೀ ನಿನ್ನೆ ಅಜಿತ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು.
ಸುರೇಶ್ ಭಾಯಿ ಅವರ ಮೇಲೆ ಮೆಡಿಸನ್ ಪೊಲೀಸ್ ಇಲಾಖೆಯವರು ಮಾಡಿದ ದೌರ್ಜನ್ಯವನ್ನು ಖಂಡಿಸುತ್ತೇನೆ. ಮಿ. ಪಟೇಲ್ ಅವರಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ನ್ಯಾಯ ಒದಗಿಸುತ್ತೇನೆ ಎಂಬ ಭರವಸೆಯನ್ನು ನಾನು ಭಾರತ ಸರ್ಕಾರಕ್ಕೆ ನೀಡುತ್ತೇನೆ ಎಂದಿದ್ದಾರೆ.
ಫೆ.6ರಂದು ಬೆಳಗ್ಗೆ ವಾಕಿಂಗ್ಗೆ ಹೋಗುತ್ತಿದ್ದ ವೇಳೆ ಪ್ರಶ್ನಿಸಲ್ಪಟ್ಟಿದ್ದ ಸುರೇಶ್ ಭಾಯಿ ಪಟೇಲ್ ಅವರು ಇಂಗ್ಲಿಷ್ ಗೊತ್ತಿಲ್ಲದ ಕಾರಣಕ್ಕೆ ಪೊಲೀಸರಿಗೆ ಸೂಕ್ತ ಉತ್ತರ ನೀಡಲಾಗದೆ ತಡಬಡಿಸಿದ್ದರು. ಆಗ ಅಲಬಾಮಾ ಪೊಲೀಸ್ ದಳದ ಇಬ್ಬರು ಪೊಲೀಸರು ಪಟೇಲ್ ಅವರನ್ನು ಅನಗತ್ಯವಾಗಿ ಹಿಗ್ಗಾಮುಗ್ಗಾ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದರು.
ಒಟ್ಟು ಪರಿಣಾಮವಾಗಿ ಸುರೇಶ್ಭಾಯಿ ಪಟೇಲ್ ಅವರು ಆಂಶಿಕವಾಗಿ ಪಾರ್ಶ್ವವಾಯುವಿಗೆ ಗುರಿಯಾಗಿದ್ದರು. ಪ್ರಕೃತ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಸಲ್ಪಟ್ಟ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ.