ಬೆಳಗಾವಿ: ಲೇವಾದೇವಿಗಾರರ ಬಳಿ ಸಾಲ ಪಡೆದು ಒತ್ತಡದಿಂದ ಕರ್ನಾಟಕದಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲಿಯೇ, ಕರ್ನಾಟಕ ಸರ್ಕಾರ ಎಲ್ಲ ಜಿಲ್ಲೆಗಳಲ್ಲೂ ಇಂತಹ ಪ್ರಕರಣಗಳ ವಿಚಾರಣೆಗೆ ಚೌಕಿಗಳನ್ನು ತೆರೆದು ಕರ್ನಾಟಕ ಲೇವಾದೇವಿಗಾರ ಕಾಯ್ದೆ ೧೯೬೧ ಕ್ಕೆ ತಿದ್ದುಪಡಿ ತರುವ ನಿರ್ಧಾರ ಮಾಡಿದೆ.
ರೈತರ ರಕ್ತ ಹೀರುತ್ತಿರುವ ಲೇವಾದೇವಿಗಾರರಿಗೆ ಕಡಿವಾಣ ಹಾಕಲು ಹೆಚ್ಚಿನ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವ ಎಚ್ ಎಸ್ ಮಹವೇವ ಪ್ರಸಾದ್ ತಿಳಿಸಿದ್ದಾರೆ.
ಲೇವಾದೇವಿಗಾರಾರು ಅತಿ ಹೆಚ್ಚು ಬಡ್ಡಿ ದರವನ್ನು ರೈತರ ಮೇಲೆ ಹೇರುತ್ತಿರುವುದನ್ನು ನಿಯಂತ್ರಣಗೊಳಿಸಲು ಕಾನೂನಿಗೆ ತಿದ್ದುಪಡಿ ತರುವುದಾಗಿ ಕಾನೂನು ಸಚಿವ ಟಿ ಬಿ ಜಯಚಂದ್ರ ತಿಳಿಸಿದ್ದಾರೆ.
ಒಂದೇ ದಿನದಲ್ಲಿ ಏಳು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಎಲ್ಲ ರೈತರ ಕುಟುಂಬಗಳನ್ನು ಸಹಕಾರ ಸಂಘಗಳ ಸದುಪಯೋಗ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಿ ಪರಿಹಾರ ನೀಡುವುದಾಗಿ ತಿಳಿಸಿದೆ.
Advertisement