ಬೆಂಗಳೂರು: ಜವಳಿ, ಬಂದರೂ ಹಾಗೂ ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ ಪ್ರಕರಣ ದಾಖಲಿಸಿರುವ ಹುಬ್ಬಳಿ ಮೂಲದ ಮಹಿಳೆ ಅಂಜನಾ ಅವರು ರಕ್ಷಣೆ ಕೋರಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಅಪರಿಚಿತ ದುಷ್ಕರ್ಮಿಗಳು ತಮ್ಮ ಮೊಬೈಲ್ ಫೋನ್ಗೆ ಕರೆ ಮಾಡಿ ತೆಲುಗು ಭಾಷೆಯಲ್ಲಿ ಮಾತನಾಡಿ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ತಮಗೆ ಪ್ರಾಣಭೀತಿಯಿದ್ದು ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ಬುಧವಾರ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
'ಅಂಜನಾ ಅವರು ತಮಗೆ ಪ್ರಾಣ ಬೆದರಿಕೆ ಕರೆ ಬಂದಿದೆ. ಹೀಗಾಗಿ ರಕ್ಷಣೆ ಕೊಡಿ ಎಂದು ಮನವಿ ಪತ್ರ ನೀಡಿದ್ದಾರೆ. ಬೆದರಿಕೆ ಬಗ್ಗೆ ತನಿಖೆ ನಡೆಸುವಂತೆ ಪಶ್ಚಿಮ ವಿಭಾಗ ಡಿಸಿಪಿಲಾಬೂರಾಮ್ ಅವರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಸೂಕ್ತ ರಕ್ಷಣೆ ಒದಗಿಸಬೇಕು ಎಂದೂ ಸೂಚಿಸಲಾಗಿದೆ' ಎಂದು ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ಚಿಂಚನಸೂರ್ ಅವರು ತಮ್ಮ 3 ಕಾರ್ಖಾನೆಗಳ ನವೀಕರಣಕ್ಕೆಂದು ತಮ್ಮಿಂದ ವಾರ್ಷಿಕ ಶೇ.12ರ ಬಡ್ಡಿದರದಲ್ಲಿ 11.88ಕೋಟಿ ರುಪಾಯಿ ಸಾಲ ಪಡೆದಿದ್ದರು. ಈ ಬಗ್ಗೆ ಸ್ಟ್ಯಾಂಪ್ ಪೇಪರ್ ಮೇಲೆ ಅಗ್ರಿಮೆಂಟ್ ಕೂಡ ಆಗಿದೆ. ಅದಕ್ಕೆ ಶ್ಯೂರಿಟಿ ರೂಪದಲ್ಲಿ ಚೆಕ್ಗಳನ್ನು ಕೂಡ ನೀಡಿದ್ದರು. ಆದರೆ ಹಣ ವಾಪಸ್ ಮಾಡಿಲ್ಲ. ನೀಡಿದ್ದ ಚೆಕ್ಗಳು ಬೌನ್ಸ್ ಆಗಿದ್ದವು. ಹೀಗಾಗಿ ಜೂ. 29ರಂದು ಅಂಜನಾ ಅವರು ನ್ಯಾಯಾಲಯಕ್ಕೆ ದೂರು ನೀಡಿದ್ದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ನಿರ್ದೇಶಕರ ಹುದ್ದೆಗೆ ನಿಮ್ಮ ಹೆಸರನ್ನು ಶಿಫಾರಸು ಮಾಡಿದ್ದಾರೆ. ಹೀಗಾಗಿ ಯಾವುದೇ ದೂರು ನೀಡಬೇಡಿ ಎಂದು ಚಿಂಚನಸೂರ್ ಅವರ ವಿಶೇಷ ಅಧಿಕಾರಿ ಬಸವರಾಜ ಅವರು ಭರವಸೆ ನೀಡಿದ್ದರು ಎಂದೂ ಅಂಜನಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.
Advertisement