ಐಐಟಿ ಮದ್ರಾಸ್ ಮತ್ತು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪರಿಶಿಷ್ಟ ಜಾತಿ ಆಯೋಗ ಸಮನ್ಸ್
ನವದೆಹಲಿ: ಐಐಟಿ ಮದ್ರಾಸ್ ಸಂಸ್ಥೆ ಅಂಬೇಡ್ಕರ್-ಪೆರಿಯಾರ್ ವಿದ್ಯಾರ್ಥಿ ಅಧ್ಯಯನ ಬಳಗದ ಮಾನ್ಯತೆಯನ್ನು ರದ್ದು ಮಾಡಿರುವ ವಿವಾದದಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ನೀಡಿದ್ದ ನೋಟಿಸ್ ಗೆ ನೀಡಿರುವ ಉತ್ತರ ಸಮರ್ಪಕವಾಗಿಲ್ಲ ಎಂದು ಮಾನವ ಸಂಪನ್ಮೂಲಗಳ ಸಚಿವಾಲಯದ ಉನ್ನತ ಶಿಕ್ಷಣದ ಕಾರ್ಯದರ್ಶಿ ಮತ್ತು ಐಐಟಿ ಮದ್ರಾಸ್ ನಿರ್ದೇಶಕ ರನ್ನು ಜೂನ್ ೮ ರ ಒಳಗೆ ಆಯೋಗದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಅವರುಗಳಿಂದ ವೈಯಕ್ತಿಕವಾಗಿ ಕೆಲವು ಸ್ಪಷ್ಟೀಕರಣಗಳನ್ನು ಕೇಳಬೇಕಾಗಿರುವುದರಿಂದ ಸಮನ್ಸ್ ನೀಡಲಾಗಿದೆ ಎಂದು ಆಯೋಗದ ಅಧ್ಯಕ್ಷ ಪಿ ಎಲ್ ಪುನಿಯಾ ತಿಳಿಸಿದ್ದಾರೆ.
"ನಮ್ಮ ಪತ್ರಕ್ಕೆ ಪ್ರತಿಯಾಗಿ ಅವರು ಉತ್ತರ ನೀಡಿದ್ದಾರೆ. ಅವರು ವಿದ್ಯಾರ್ಥಿ ಅಧ್ಯಯನ ಬಳಗದ ಮಾನ್ಯತೆ ರದ್ದುಪಡಿಸಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರತಿಕ್ರಿಯೆಯಿಂದ ನಮಗೆ ತೃಪ್ತಿಯಾಗಿಲ್ಲ. ಆದುದರಿಂದ ಜೂನ್ ೮ ರೊಳಗೆ ಖುದ್ದಾಗಿ ಆಯೋಗದ ಮುಂದೆ ಹಾಜರಾಗುವಂತೆ ತಿಳಿಸಿದ್ದೇವೆ" ಎಂದು ಪುನಿಯಾ ತಿಳಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಬಗ್ಗೆ ಟೀಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಐಐಟಿ ಮದ್ರಾಸ್ ಸಂಸ್ಥೆ ಅಂಬೇಡ್ಕರ್-ಪೆರಿಯಾರ್ ವಿದ್ಯಾರ್ಥಿ ಅಧ್ಯಯನ ಬಳಗದ ಮಾನ್ಯತೆಯನ್ನು ರದ್ದು ಮಾಡದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಸ್ವಂತ ಗಮನಕ್ಕೆ ತಂದುಕೊಂಡ ಪರಿಶಿಷ್ಟ ಜಾತಿಗಳ ಆಯೋಗ ಐಐಟಿ ಮದ್ರಾಸ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ