ಜಮಾನ್ ನಾಯಕನ ಮರಣದಂಡನೆಯನ್ನು ಎತ್ತಿ ಹಿಡಿದ ಬಾಂಗ್ಲ ಸುಪ್ರೀಮ್ ಕೋರ್ಟ್
ಢಾಕ: ಜಮಾತ್-ಎ-ಇಸ್ಲಾಮಿ ಮುಖಂಡ ಅಲಿ ಅಶನ್ ಮುಹಮ್ಮದ್ ಮುಜಾಹೀದ್ ಅವರಿಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಬಾಂಗ್ಲಾದೇಶದ ಸುಪ್ರೀಮ್ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುರೇಂದರ್ ಕುಮಾರ್ ಸಿನ್ಹಾ ಒಳಗೊಂಡ ನಾಲ್ಕು ಜನರ ಪೀಠ, ಪಾಕಿಸ್ತಾನ ಬೆಂಬಲಿತ ೬೭ ವರ್ಷದ ಆಲ್-ಬದರ್ ನ ಮಾಜಿ ಕಮ್ಯಾಂಡರ್ ಅವರಿಗೆ ಮರಣದಂಡಂನೆಯನ್ನು ಧೃಢೀಕರಿಸಿದೆ ಎಂದು ಬಿಡಿನ್ಯೂಸ್೨೪ ವರದಿ ಮಾಡಿದೆ.
ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದ ಒಬ್ಬ ರಾಜಕಾರಿಣಿಯನ್ನು ಬಾಂಗ್ಲಾದೇಶದಲ್ಲಿ ಯುದ್ಧ ಅಪರಾಧಗಳಿಗಾಗಿ ಇದೆ ಮೊದಲಬಾರಿಗೆ ಶಿಕ್ಷೆಗೆ ಗುರಿಪಡಿಸಲಾಗಿದೆ.
ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ ಮತ್ತು ಜಮಾತ್ ಮೈತ್ರಿ ಸಂಪುಟದಲ್ಲಿ ಮುಜಾಹಿದ್ ಸಾಮಜಿಕ ಕಲ್ಯಾಣ ಸಚಿವರಾಗಿದ್ದರು. ಬಾಂಗ್ಲಾ ಸ್ವಾಂತತ್ರ್ಯ ಚಳುವಳಿ ವೇಳೆಯಲ್ಲಿ ಪಾಕಿಸ್ತಾನದ ಜೊತೆ ಶಾಮೀಲಾಗಿ ಹಲವಾರು ಚಿಂತಕರು, ವಿಜ್ಞಾನಿಗಳು ಮತ್ತು ಪತ್ರಕರ್ತರನ್ನು ಗುಂಪಾಗಿ ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿ ಶಿಕ್ಷೆಗೆ ಒಳಗಾಗಿದ್ದಾರೆ.
ಆಗಸ್ಟ್ ೨೦೧೩ ರಲ್ಲಿ ಅಂತರಾಷ್ಟ್ರೀಯ ಅಪರಾಧಗಳ ಸಮಿತಿ ಈ ಜಮಾತ್ ಮುಖಂಡನಿಗೆ ಮರಣ ದಂಡನೆ ಶಿಕ್ಷೆ ನೀಡಿತ್ತು.
ಆ ವರ್ಷವೇ ಆಗಸ್ಟ್ ೧೧ರಂದು ಮುಜಾಹಿದ್ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.