ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಕರ್ನಾಟಕದ ಐಎಎಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮದನ ಗೋಪಾಲ್ ಅವರು ಪ್ರಧಾನಿಗೆ ಆನ್ಲೈನ್ ಮೂಲಕ ಮನವಿ ಸಲ್ಲಿಸಿದ್ದು, ರವಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಗೆ ಮಾತನಾಡಿದ ಗೋಪಾಲ್ ಅವರು, ಒಬ್ಬ ದಕ್ಷ ಐಎಎಸ್ ಅಧಿಕಾರಿಯ ಚಾರಿತ್ರ್ಯವಧೆ ನಡೆಯುತ್ತಿದ್ದು, ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ರವಿ ನಿಗೂಢ ಸಾವಿನ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆ ಸಿಬಿಐಗೆ ವಹಿಸಲೇಬೇಕು. ಈ ಮಧ್ಯೆ ಕೆಲವರು ಅವರ ಚಾರಿತ್ರ್ಯವಧೆ ಮಾಡುವ ಮೂಲಕ ರವಿಯನ್ನು ಎರಡನೇ ಬಾರಿ ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಸೇರಿದಂತೆ ಪಂಕಜ್ ಪಾಂಡೆ, ಸಮೀರ್ ಶುಕ್ಲಾ ಮತ್ತು ಶ್ರೀವತ್ಸ ಶ್ರೀಕೃಷ್ಣ ಮತ್ತು ಇತರ ಕೆಲವು ಐಎಎಸ್ ಅಧಿಕಾರಿಗಳು ಪ್ರಧಾನಿಗೆ ಸಲ್ಲಿಸದ ಮನವಿಗೆ ಸಹಿ ಹಾಕಿದ್ದಾರೆ ಎಂದು ಮದನ್ ಗೋಪಾಲ್ ತಿಳಿಸಿದರು.
Advertisement