ಹೈಕೋರ್ಟ್
ಪ್ರಧಾನ ಸುದ್ದಿ
ಡಿಕೆ ರವಿ ಸಾವು ಪ್ರಕರಣ; ಮಧ್ಯಂತರ ವರದಿ ಅರೆಬೆಂದ ವರದಿಗಳು: ಹೈಕೋರ್ಟ್
ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣದ ಸಿಐಡಿ ತನಿಖಾ ಪ್ರಗತಿ ವರದಿಯನ್ನು ಸರ್ಕಾರ ಸೋಮವಾರ ಹೈಕೋರ್ಟ್ಗೆ ಸಲ್ಲಿಸಿದೆ.
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣದ ಸಿಐಡಿ ತನಿಖಾ ಪ್ರಗತಿ ವರದಿಯನ್ನು ಸರ್ಕಾರ ಸೋಮವಾರ ಹೈಕೋರ್ಟ್ಗೆ ಸಲ್ಲಿಸಿದೆ.
ಸಿಐಡಿ ಮಧ್ಯಂತರ ವರದಿ ಬಹಿರಂಗದ ವಿರುದ್ಧ ಮಹಿಳಾ ಐಎಎಸ್ ಅಧಿಕಾರಿ ಪತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಅಂತಿಮ ವರದಿ ಸಲ್ಲಿಕೆಗೂ ಮೊದಲೇ ಸದನದಲ್ಲಿ ಹೇಳಿಕೆ ನೀಡುವುದು ಸರಿಯೇ ಎಂದು ಸರ್ಕಾರವನ್ನು ಪ್ರಶ್ನಿಸಿತು.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರು, ಸರ್ಕಾರದ ವಿರುದ್ಧ ಅಪಪ್ರಚಾರ ನಡೆಯುತ್ತಿತ್ತು. ಹೀಗಾಗಿ ಜನರಿಗೆ ಸತ್ಯ ತಿಳಿಸುವ ಉದ್ದೇಶ ಸರ್ಕಾರ ಸದನದಲ್ಲಿ ವರದಿ ಮಂಡನೆಗೆ ಮುಂದಾಗಿತ್ತು. ಅಲ್ಲದೆ ಸದನದಲ್ಲಿ ಹೇಳಿಕೆ ನೀಡುವ ಹಕ್ಕು ಸರ್ಕಾರಕ್ಕಿದೆ. ಆದರೆ ತಡೆ ಆದೇಶದಿಂದ ಸದನದ ಸದಸ್ಯರ ಅಧಿಕಾರ ಮೊಟಕುಗೊಳಿಸಿದಂತಾಗಿದೆ ಎಂದರು.
ಪ್ರಕರಣ ಸಂಬಂಧ ಖುದ್ದು ಮಹಿಳಾ ಐಎಎಸ್ ಅಧಿಕಾರಿಯೇ ಸಿಐಡಿಗೆ ಹೇಳಿಕೆ ನೀಡಿದ್ದಾರೆ. ಮೃತ ಡಿ.ಕೆ.ರವಿ ಜೊತೆ ಸೌಹಾರ್ದಯುತ ಸಂಬಂಧ ಇತ್ತೆಂದು. ಅವರ ಜೊತೆ ಹಣ ವಿನಿಮಯ ಇತ್ತೆಂದು ತನಿಖೆ ವೇಳೆ ತಿಳಿಸಿದ್ದಾರೆ. ಅಲ್ಲದೇ ತನಿಖಾ ತಂಡ ಬೇರೆ, ಬೇರೆ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸಿದೆ ಎಂದು ಹೇಳಿದರು.
ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ಸಿಐಡಿ ಮಧ್ಯಂತರ ವರದಿ ಬಹಿರಂಗಕ್ಕೆ ತಡೆ ನೀಡಿದ್ದ ಹೈಕೋರ್ಟ್, ವಿಚಾರಣೆಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಿತ್ತು.

