ಇಂದು ಜಯಲಲಿತಾ ಭವಿಷ್ಯ ನಿರ್ಧಾರ: ಹೈಕೋರ್ಟ್ ಸುತ್ತಾಮುತ್ತ ನಿಷೇಧಾಜ್ಞೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರು ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಜಯಲಲಿತಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ...
ಜಯಲಲಿತಾ
ಜಯಲಲಿತಾ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರು ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಜಯಲಲಿತಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಬಗ್ಗೆ ಇಂದು ತೀರ್ಪು ಹೊರಬೀಳಲಿದ್ದು, ಭದ್ರತೆ ದೃಷ್ಟಿಯಿಂದ ಹೈಕೋರ್ಟ್ ಸುತ್ತಾಮುತ್ತ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಹೈಕೋರ್ಟ್ ಸುತ್ತಮುತ್ತ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೋರ್ಟ್ ಆವರಣದಲ್ಲಿ ಶ್ವಾನದಳದಿಂದ ತಪಾಸಣೆ ನಡೆಸಲಾಗಿದ್ದು, ಇಬ್ಬರು ಡಿಸಿಪಿಗಳು, 20 ಎಸಿಪಿಗಳು, 16 ಇನ್ಸ್ ಪೆಕ್ಟರ್ ಗಳು, 10 ಕೆಎಸ್ ಆರ್ ಪಿ ತುಕಡಿ, 3 ಸಿಎಆರ್ ತುಕಡಿ ಸೇರಿದಂತೆ ಭದ್ರತೆಗಾಗಿ 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ತೀರ್ಪು ಪ್ರಕಟವಾಗುವವರೆಗೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯವಿಲ್ಲ. ಕೆಎಸ್ಆರ್ ಟಿಸಿ ಬಸ್ ಗಳ ಸಂಚಾರದಲ್ಲಿ ವ್ಯತ್ಯಯವಿಲ್ಲ. ಕೋರ್ಟ್ ತೀರ್ಪು ಬಳಿಕ ಪರಿಸ್ಥಿತಿ ಅವಲೋಕಿಸಿ ಸರ್ಕಾರಿ ಬಸ್ ಗಳ ಸಂಚಾರ ಬದಲಾವಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂಬ ಮಾಹಿತಿ ನೀಡಿರುವ ಕೆಎಸ್ಆರ್ ಟಿಸಿ ಅಧಿಕಾರಿಗಳು, ಬೆಳಗ್ಗೆ 11ರವರೆಗೆ ತಮಿಳುನಾಡಿಗೆ ಕರ್ನಾಟಕ ಸಾರಿಗೆ ಬಸ್ ಸಂಚಾರ ಮಾಡಲಿದೆ. ಹಾಗೇ ತಮಿಳುನಾಡು ಸಂಚಾರ ವ್ಯವಸ್ಥೆಯಲ್ಲೂ ಬದಲಾವಣೆ ಇಲ್ಲ ಎಂದಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರು ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಜಯಲಲಿತಾ ಪರ ವಕೀಲರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಕ್ತಾಯವಾಗಿತ್ತು. ಮೇ 11ರಂದು ಹೈಕೋರ್ಟ್ ನ ವಿಶೇಷ ಪೀಠ ತೀರ್ಪು ಪ್ರಕಟಿಸಲಿದೆ.

ಅಕ್ರಮ ಆಸ್ತಿಗಳಿಕೆ ಆರೋಪ ಸಾಬೀತಾದ ಕಾರಣ, ಬೆಂಗಳೂರು ವಿಶೇಷ ನ್ಯಾಯಾಲಯ ಜಯಲಲಿತಾ ಸೇರಿದಂತೆ ಅವರ ಸ್ನೇಹಿತೆ ಶಶಿಕಲಾ, ದಿನಕರನ್ ಮತ್ತು ಇಳವರಸಿ ಸೇರಿ ನಾಲ್ವರು ಆರೋಪಿಗಳಿಗೂ 4 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಬಳಿಕ ಜೈಲು ಸೇರಿದ್ದ ಯಲಲಿತಾ ಅವರು ಸೆಷನ್ಸ್ ಕೋರ್ಟ್ ನ ತೀರ್ಪು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ವಿಶೇಷ ಪೀಠ ನಾಳೆ ತೀರ್ಪು ಪ್ರಕಟಿಸಲಿದ್ದು, ಇಂದು ಬೆಳಗ್ಗೆ 11ಗಂಟೆಯೊಳಗೆ ಜಯಲಲಿತಾ ಭವಿಷ್ಯ ನಿರ್ಧಾರವಾಗಲಿದೆ.

ಒಂದು ವೇಳೆ ಜಯಲಲಿತಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದೇ ಆದರೆ ಜಯಲಲಿತಾ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗುತ್ತದೆ. ಸುಪ್ರೀಂ ಕೋರ್ಟ್‍ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದಾದರೂ, ಕೋರ್ಟ್ ಗೆ ಸರೆಂಡರ್ ಸರ್ಟಿಫಿಕೇಟ್ ಸಲ್ಲಿಸಬೇಕಿರುವುದರಿಂದ ಜೈಲಿಗೆ ಹೋದ ಬಳಿಕವಷ್ಟೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಅಧೀನ ನ್ಯಾಯಾಲಯದ ಪ್ರಕಟಿಸಿರುವ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದರೂ ಜಯಾಗೆ ಜಾಮೀನು ಸಿಗುವುದು ಕಷ್ಟಸಾಧ್ಯ. ಏಕೆಂದರೆ ವಿಶೇಷ ನ್ಯಾಯಾಲಯದಲ್ಲಿ ಮಾತ್ರ 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ಪ್ರಕಟವಾದರೆ ತಕ್ಷಣ ಜಾಮೀನು ಪಡೆಯಬಹುದು. ಹೀಗಾಗಿ ಮೇಲ್ಮನವಿಯಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾದರೂ ಜಯಾ ಜಾಮೀನಿಗಾಗಿ ಸುಪ್ರೀಂ ಮೊರೆ ಹೋಗಲೇಬೇಕು.

ಎಸ್‍ಪಿಪಿಯಾಗಿ ನೇಮಕವಾದ ಬಿ.ವಿ. ಆಚಾರ್ಯ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಯಾ ಪ್ರಕರಣ ತಮಿಳುನಾಡಿನಿಂದ ಕರ್ನಾಟಕಕ್ಕೆ ವರ್ಗವಾದ ಬಳಿಕ ಅದರ ಸಂಪೂರ್ಣ ಹೊಣೆ ರಾಜ್ಯ ಸರ್ಕಾರದ್ದೇ ಆಗಿದೆ. ಆದರೆ ಮೇಲ್ಮನವಿ ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಆದ್ದರಿಂದಾಗಿ ಜಯಾ ಅರ್ಜಿ ವಿಚಾರಣೆಗೆ ಯೋಗ್ಯವಾದದ್ದಲ್ಲ ಎಂದು ಪ್ರಬಲವಾದ ಲಿಖಿತ ಹೇಳಿಕೆ ಮಂಡಿಸಿದ್ದಾರೆ. ಹೀಗಾಗಿ ನಾಳೆ ಹೈಕೋರ್ಟ್ ನೀಡಲಿರುವ ತೀರ್ಪು ಏನಾಗಲಿಗೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com