ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪ್ರಕರಣದಲ್ಲಿ ರಾಜ್ಯ ಸರ್ಕಾರ, ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ತಿಳಿಸುವಂತೆ ಎಸ್ಪಿಪಿ ಬಿ.ವಿ.ಆಚಾರ್ಯ ಅವರಿಗೆ ಕಾನೂನು ಇಲಾಖೆ ಪತ್ರ ಬರೆದಿದೆ.
ಜಯಲಲಿತಾ ಅವರು ಸೇರಿ ನಾಲ್ವರು ನಿರ್ದೋಷಿ ಎಂದು ಕಳೆದ ಸೋಮವಾರವಷ್ಟೇ ಹೈಕೋರ್ಟ್ ತೀರ್ಪು ನೀಡಿತ್ತು. ಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದ್ದು, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ದಾಖಲಿಸಬೇಕು. ಈ ಕುರಿತು ಸರ್ಕಾರ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಿವರ ಕೇಳಿ ಕಾನೂನು ಇಲಾಖೆ ಆಚಾರ್ಯ ಅವರಿಗೆ ಪತ್ರ ಬರೆದಿದೆ.
ಹೈಕೋರ್ಟ್ ಆದೇಶದಲ್ಲಿ ನೀಡಿರುವ ಅಂಕಿ ಅಂಶ ಗಮನಿಸಿದಾಗ ನಾಲ್ವರು ವಿವಿಧ ಬ್ಯಾಂಕ್ಗಳಿಂದ ಪಡೆದಿರುವ ಸಾಲದ ಮೊತ್ತ ಕೂಡಿದಾಗ 10,67,31,274 ಆಗುತ್ತದೆ. ಆದರೆ ಆದೇಶದಲ್ಲಿ ಒಟ್ಟು ಮೊತ್ತ 24,17,31,274 ಎಂದು ತಪ್ಪಾಗಿ ಉಲ್ಲೇಖಿಸಿದೆ ಎಂದು ಆಚಾರ್ಯ ಅವರು ಆದೇಶದಲ್ಲಿನ ಲೋಪವನ್ನು ಮಂಗಳವಾರ ಪತ್ತೆ ಹಚ್ಚಿದ್ದರು.
ಲೋಪ ಸಾಬೀತಾದರೆ ಮುಂದೇನು?
ಆದೇಶದಲ್ಲಿನ ಲೋಪ ಸಾಬೀತಾದರೆ ರಾಜ್ಯ ಸರ್ಕಾರ ಮತ್ತು ಹೈಕೋರ್ಟ್ನ ಮುಂದಿನ ನಡೆಯೇನು ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
ಕಾನೂನು ತಜ್ಞರು ಹೇಳುವ ಪ್ರಕಾರ ರಾಜ್ಯ ಸರ್ಕಾರ ಆದೇಶದಲ್ಲಾಗಿರುವ ಲೋಪವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಕ್ರಿಮಿನಲ್ ಪ್ರಕರಣದಲ್ಲಿ ಹೈಕೋರ್ಟ್ ಆದೇಶವನ್ನು ಹಿಂಪಡೆಯಲು ಅಥವಾ ಪುನರ್ಪರಿಶೀಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement