ಗೋಮಾಂಸ ಸೇವನೆಗೆ ಪ್ರಾಚೀನ ಧರ್ಮಗ್ರಂಥಗಳಲ್ಲಿ ನಿಷೇಧವಿಲ್ಲ: ವಿಜ್ಞಾನಿ ಭಾರ್ಗವ
ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯ ಬಗ್ಗೆ ಪ್ರತಿಷ್ಟಿತ ಪ್ರಶಸ್ತಿ ಪದ್ಮಭೂಷಣ ಹಿಂದಿರುಗಿಸುವುದಾಗಿ ಖ್ಯಾತ ವಿಜ್ಞಾನಿ ಮತ್ತು 'ಸೆಲ್ಯುಲಾರ್ ಮತ್ತು ಮಾಲೆಕ್ಯುಲಾರ್ ಜೀವಶಾಸ್ತ್ರ ಕೇಂದ್ರ'ದ ಸಂಸ್ಥಾಪಕ ನಿರ್ದೇಶಕ ಪಿ ಎಂ ಭಾರ್ಗವ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಈಗ ಆಂಗ್ಲ ಪತ್ರಿಕೆಯೊಂದರ ವರದಿಯ ಪ್ರಕಾರ ಭಾರ್ಗವ ಅವರು ಚರಕ ಸಂಹಿತೆಯನ್ನು ಉದಾಹರಿಸಿ "ವಾಯು ಹೆಚ್ಚಾಗಿ ತೀವ್ರ ಜ್ವರ, ಒಣ ಕೆಮ್ಮು, ಸುಸ್ತು ಮತ್ತು ಹೆಚ್ಚು ಶ್ರಮದ ಕೆಲಸ ಮಾಡುವವರಿಗೆ ಆಗುವ ಅತೀವ ಹೊಟ್ಟೆ ಹಸಿವಿನಿಂದ ಉಂಟಾಗುವ ತೊಂದರೆಗಳಿಗೆ ಹಸುವಿನ ಮಾಂಸ ಅತಿ ಉಪಯುಕ್ತ ಎಂದು ತಿಳಿಸಿದೆ" ಎಂದು ಬರೆದಿದ್ದರು ಎಂದಿದೆ.
ಬಿಜೆಪಿ ಮತ್ತು ಆರ್ ಎಸ್ ಎಸ್ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಕಾರಣ ಎಂದಿರುವ ಅವರು "ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಮುಖ ಬಿಜೆಪಿ ಎಂಬುದು ನೀವು ಚೆನ್ನಾಗಿ ಬಲ್ಲಿರಿ. ಹಾಗೂ ಆರ್ ಎಸ್ ಎಸ್ ಹಿಂದುತ್ವ ಸಿದ್ಧಾಂತಕ್ಕಾಗಿರುವ ಸಂಸ್ಥೆ. ಇದರ ಸಿದ್ಧಾಂತ ಒಡಕು ಮೂಡಿಸುವುದು, ಅವೈಜ್ಞಾನಿಕ ಮತ್ತು ಅತಾರ್ಕಿಕ" ಎಂದು ಕೂಡ ಅವರು ತಿಳಿಸಿದ್ದರು ಎನ್ನಲಾಗಿದೆ.
ವೈಜ್ಞಾನಿಕ ಕ್ಷೇತ್ರದಲ್ಲಿ ಮೋದಿ ಸರ್ಕಾರಕ್ಕೆ ಇರುವ ಜ್ಞಾನ ಅತ್ಯಲ್ಪ ಎಂದು ಕೂಡ ಅವರು ಹೇಳಿದ್ದು, ಮೂಢನಂಬಿಕೆ, ಅತಾರ್ಕಿಕತೆಯಲ್ಲಿ ಮುಳುಗಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ವೈಜ್ಞಾನಿಕ ಮನೋಭಾವದ ವಿರುದ್ಧ ಮುನ್ನಡೆದಿದೆ ಎಂದು ಕೂಡ ಭಾರ್ಗವ ಬರೆದಿದ್ದರು ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ