ಬೆಂಗಳೂರು: ``ರಾಜಕೀಯವೂ ಸೇರಿದಂತೆ ಜೀವನದಲ್ಲಿ ನೀವು ಏನನ್ನಾದರೂ ಸಾಧಿಸಬೇಕಾದರೆ ಬೇಕಾದರೆ ನಿಮ್ಮ ಸುತ್ತ ಮುತ್ತ ಇರುವ ಜನರ ದನಿಯನ್ನು ಆಲಿಸುವುದನ್ನು ಕಲಿಯಬೇಕು''. ಹೀಗೆಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯರ ನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮುನ್ಸೂಚನೆ ನೀಡಿದ್ದಾರೆ. ಯಾರೊಂದಿಗೂ ಬೆರೆಯುವುದಿಲ್ಲ, ಅವರ ಮಾತು ಕೇಳುವುದಿಲ್ಲ ಎಂಬ ಆರೋಪಗಳಿಗೆ ತಮ್ಮ ಮಾತಿನ ಮೂಲಕವೇ ಉತ್ತರ ನೀಡಿರುವ ಅವರು, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರುವ ಮುನ್ಸೂಚನೆ ನೀಡಿದ್ದಾರೆ. ಆ ಬಳಿಕ ಪಕ್ಷದ ಹಿರಿಯ ಮತ್ತು ಕಿರಿಯರನ್ನು ಜತೆ ಜತೆಯಾಗಿ ತೆಗೆದುಕೊಂಡು ತೆಗೆದುಕೊಂಡು ಹೋಗುವ ಸುಳಿವನ್ನೂ ನೀಡಿದ್ದಾರೆ.ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು , ತಮ್ಮ ರಾಜಕೀಯ ಜೀವನವನ್ನು ಮೆಲಕು ಹಾಕಿದರು. ಜತೆ ಜತೆಗೇ ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡ ಅವರು, ಬಡತನ ನಿವಾರಣೆಗೆ ಕಾಂಗ್ರೆಸ್ವೊಂದೇ ಮಾರ್ಗ ಎಂದರು. ``ಹತ್ತು ವರ್ಷದ ಹಿಂದೆ ರಾಜಕೀಯಕ್ಕೆ ಬಂದಾಗ, ಭಾರತದಲ್ಲಿನ ಸಮಸ್ಯೆಗಳು ತುಂಬಾ ಸರಳ ಅನ್ನಿಸಿದ್ದವು, ಆದರೆ ದಿನಕಳೆದಂತೆ ಇವು ಸುಲಭವಾದ ಸಮಸ್ಯೆಗಳಲ್ಲ ಎಂಬುದು ಅರಿವಾಗುತ್ತಾ ಹೋಯಿತು.