ಬಿಜೆಪಿ ಸರ್ಕಾರದಲ್ಲಿ ರಚನೆಯಾಗಿದ್ದ ಗೋಸೇವಾ ಆಯೋಗ ರದ್ದು
ಬೆಂಗಳೂರು: ಗೋ ಸಂರಕ್ಷಣೆಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ಕರ್ನಾಟಕ ಗೋಸೇವಾ ಆಯೋಗವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗೋಸೇವಾ ಆಯೋಗವನ್ನು ವಿಸರ್ಜಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ಗೋಸೇವಾ ಆಯೋಗವನ್ನು ವಿಸರ್ಜಿಸಿ, ಅದನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯೊಂದಿಗೆ ವಿಲೀನಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಹಾಲು ಉತ್ಪಾದನೆ ಕಡಿಮೆ ಎಂಬ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಾಟಿ ಹಸುಗಳು ಕಸಾಯಿಖಾನೆ ಪಾಲಾಗುತ್ತಿದ್ದವು. ಇದನ್ನು ತಡೆಯಲು ಮತ್ತು ಈ ಸಂಬಂಧ ಜಾಗೃತಿ ಮೂಡಿಸಲು ಬಿಜೆಪಿ ಸರ್ಕಾರ ಗೋಸೇವಾ ಆಯೋಗ ರಚಿಸಿತ್ತು.
ವಿಶೇಷ ಅಧಿವೇಶನ
ಬೆಂಗಳೂರಿನಲ್ಲಿ 10 ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಲು ಸಂಪುಟ ಸಭೆ ತೀರ್ಮಾನಿಸಿದ್ದು, ಅಧವೇಶನದ ದಿನಾಂಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಲಿದ್ದಾರೆ ಎಂದು ಜಯಚಂದ್ರ ತಿಳಿಸಿದರು.