ಬೀಫ್ ಔತಣಕೂಟವನ್ನು ಆಯೋಜಿಸಿದ್ದಕ್ಕೆ ಜಮ್ಮು ಕಾಶ್ಮೀರದ ಪಕ್ಷೇತರ ಶಾಸಕ, ಎಂಜಿನಿಯರ್ ರಶೀದ್ ಅವರಿಗೆ ವಿಧಾನಸಭೆಯಲ್ಲೇ ಬಿಜೆಪಿ ಶಾಸಕರು ಥಳಿಸಿದ ಘಟನೆ ನಡೆದಿದೆ.
ಮೊದಲಿಗೆ ಬಿಜೆಪಿ ಶಾಸಕ ರವಿಂದರ್ ಸಿಂಗ್ ಅವರು ರಶೀದ್ ಅವರನ್ನು ಥಳಿಸಲು ಪ್ರಾರಂಭಿಸಿದ್ದಾರೆ ನಂತರ ಇತರ ಶಾಸಕರು ಅವರನ್ನು ಕೂಡಿಕೊಂಡಿದ್ದಾರೆ. ಆನಂಅತರ ಭದ್ರತಾ ಪಡೆ ರಶೀದ್ ಅವರನ್ನು ಹೊರಕ್ಕೆ ಕರೆದುಕೊಂಡು ಹೋಗಿದೆ.
ಶಾಸಕರ ಹಾಸ್ಟೆಲ್ ನಲ್ಲಿ ಬೀಫ್ ಔತಣಕೂಡ ಆಯೋಜಿಸಿದ್ದ ರಶೀದ್ ನಾಗರಿಕ ಸಮುದಾಯವನ್ನು ಅಲ್ಲಿಗೆ ಆಹ್ವಾನಿಸಿದ್ದರು. ಅಲ್ಲಿ ಕೂಡ ದಾಂಧಲೆ ನಡೆಸಿದ್ದ ಬಿಜೆಪಿ ಶಾಸಕರು ಹಾಸ್ಟೆಲ್ ಅನ್ನು ಧ್ವಂಸಗೊಳಿಸಿದ್ದಲ್ಲದೆ, ಅವರನ್ನು ತಡೆಯಲು ಬಂದ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ನೋಡಿಕೊಂಡಿದ್ದಾರೆ ಎಂದು ಕೂಡ ರಶೀದ್ ದೂರಿದ್ದರು.
"ನನ್ನ ಗುರಿ ಏನೆಂದರೆ ಸರ್ಕಾರಕ್ಕೆ ಸಂದೇಶ ಕಳುಹಿಸುವುದು... ನೀವು ಗೋಹತ್ಯೆ ನಿಷೇಧ ಜಾರಿ ಮಾಡಿ ಬಿಡಿ, ಅದರ ಬಗ್ಗೆ ಚರ್ಚಿಸಿ ಅಥವಾ ಚರ್ಚಿಸದಿರಿ.. ನಾವು ನಿಷೇಧದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಮಗೆ ಸಲ್ಲುವುದಿಲ್ಲ" ಎಂದು ದೆಹಲಿ ಮೂಲದ ದಿನಪತ್ರಿಕೆಯೊಂದಕ್ಕೆ ರಶೀದ್ ಹೇಳಿದ್ದಾರೆ.
ಈ ನಡೆಯನ್ನು ವಿರೋಧಪಕ್ಷಗಳು ಖಂಡಿಸಿವೆ. "ವಿಧಾನಸಭೆಯಲ್ಲಿ ಥಳಿಸುವುದು ತರವಲ್ಲ. ರಶೀದ್ ಆಕ್ಷೇಪಾರ್ಹ ಕೆಲಸವನ್ನು ಮಾಡಿದ್ದರೆ ಅದನ್ನು ಚರ್ಚಿಸಬೇಕೆ" ಎಂದು ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಒಮರ ಅಬ್ದುಲ್ಲ ಹೇಳಿದ್ದಾರೆ.
Advertisement