ಕೋಲ್ಕತ್ತ: "ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯ" ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತದ ಖ್ಯಾತ ವಿಜ್ಞಾನಿ ಪಿ ಎಂ ಭಾರ್ಗವ ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿ ಹಿಂದಿರುಗಿಸುವುದಾಗಿ ಗುರುವಾರ ಹೇಳಿದ್ದಾರೆ.
'ಸೆಲ್ಯುಲಾರ್ ಮತ್ತು ಮಾಲೆಕ್ಯುಲಾರ್ ಬಯಾಲಜಿ ಕೇಂದ್ರ'ದ ಸಂಸ್ಥಾಪಕ ಮತ್ತು ನಿರ್ದೇಶಕ ಭಾರ್ಗವ ಅವರು ಧಾರ್ಮಿಕ ನಂಬಿಕೆಗಳು ಮತ್ತು ವ್ಯಯಕ್ತಿಕ ಆಯ್ಕೆಗಳು ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದು ಕರೆ ನೀಡಿದ್ದಾರೆ.
"ಇಂದು ದೇಶದಲ್ಲಿ ಹೆಚ್ಚುತ್ತಿರುವ ಹಿಂದುತ್ವ ಪ್ರಚಾರದ ಅಜೆಂಡಾ ಪ್ರಜಾಪ್ರಭುತ್ವಕ್ಕೆ ಮಾರಕ.. ಧರ್ಮ ವ್ಯಯಕ್ತಿಕ ನಂಬಿಕೆ ಮತ್ತು ಅದು ವ್ಯಯಕ್ತಿಕ ವಿಷಯವಾಗಿ ಉಳಿಯಬೇಕು. ಈಗ ನಡೆಯುತ್ತಿರುವಂತೆ ಅದು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು" ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಾಗವತ್, ಮಹಿಳೆಯರು ಮನೆಗೆಲಸವಷ್ಟೇ ಮಾಡಬೇಕು ಎಂದು ನೀಡಿರುವ ಹೇಳಿಕೆ ಅಸಹನೆಯಿಂದ ಕೂಡಿರುವುವಂತದ್ದು ಎಂದು ೮೭ ವರ್ಷದ ವಿಜ್ಞಾನಿ ತೀವ್ರವಾಗಿ ಟೀಕಿಸಿದ್ದಾರೆ.
ನೂರಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರೂ ಪದ್ಮಭೂಷಣ ಅತ್ಯಂತ ಪ್ರಿಯವಾದ ಪ್ರಶಸ್ತಿಯಾಗಿತ್ತು ಆದರೆ ಇಂತಹ ವಾತಾವರಣದಲ್ಲಿ ಅದನ್ನು ಹಿಂದಿರುಗಿಸುವುದೇ ಸೂಕ್ತ ಎಂದಿರುವ ಭಾರ್ಗವ ಗೃಹ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಪ್ರಶಸ್ತಿ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ೫೦ ಕ್ಕೂ ಹೆಚ್ಚು ಬರಹಗಾರರು, ೧೫ ಕ್ಕೂ ಹೆಚ್ಚು ಸಿನೆಮಾ ನಿರ್ದೇಶಕರು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಕೋಮು ದ್ವೇಷವನ್ನು ಖಂಡಿಸಿ ನೂರಾರು ವಿಜ್ಞಾನಿಗಳು ಕೂಡ ಹೇಳಿಕೆ ನೀಡಿದ್ದಾರೆ.
Advertisement