ಚೆನ್ನೈ: ಕಾವೇರಿ ನೀರಿಗಾಗಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಮತ್ತೆ ತಗಾದೆ ತೆಗೆದಿದ್ದು, ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕ ತಮಿಳುನಾಡಿಗೆ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಸಾಂಬಾ ಬೆಳೆಗಾಗಿ ತಮಿಳುನಾಡು ಪಾಲಿನ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಜಯಲಲಿತಾ ಪ್ರಧಾನಿಗೆ ಮನವಿ ಮಾಡಿದ್ದಾರೆ.
ನ್ಯಾಯಾಧೀಕರಣದ ಅಂತಿಮ ತೀರ್ಪಿನ ಪ್ರಕಾರ, ಆಗಸ್ಟ್ 31ರೊಳಗೆ ಕರ್ನಾಟಕ ತಮಿಳುನಾಡಿಗೆ ಒಟ್ಟು 94 ಟಿಎಂಸಿ ನೀರು ಬಿಡುಬೇಕಾಗಿತ್ತು. ಆದರೆ ಇದುವರೆಗೆ 64.443 ಟಿಎಂಸಿ ನೀರನ್ನು ಮಾತ್ರ ಬಿಡಲಾಗಿದೆ. ಬಾಕಿ ಉಳಿದಿರುವ 27.557 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಜಯಾ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮಳೆಯ ತೀವ್ರ ಕೊರತೆಯಿಂದಾಗಿ ಕರ್ನಾಟಕದಲ್ಲಿರುವ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಆದರೂ ತಮಿಳುನಾಡಿಗೆ ನೀರು ಹರಿಸುವ ಅನಿವಾರ್ಯತೆ ಕರ್ನಾಟಕಕ್ಕೆ ಎದುರಾಗುವ ಸಾಧ್ಯತೆ ಇದೆ.
Advertisement