ನವದೆಹಲಿ: ಪಠಾನ್ ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರದಾಳಿಯ ತನಿಖೆ ನಡೆಸಲು ಪಾಕಿಸ್ತಾನದ ತನಿಖಾ ದಳಕ್ಕೆ ಅವಕಾಶ ಮಾಡಿಕೊಟ್ಟ ಎನ್ ಡಿ ಎ ಸರ್ಕಾರವನ್ನು ಟೀಕಿಸಿ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆಗೆ ಮಂಗಳವಾರ ತಿರುಗೇಟು ನೀಡಿರುವ ಭಾರತೀಯ ಜನತಾ ಪಕ್ಷ ಇದು ಕೇಜ್ರಿವಾಲ್ ಅವರ ಅಜ್ಞಾನ ಪ್ರದರ್ಶಿಸುತ್ತದೆ ಎಂದಿದೆ.
"ಕೇಜ್ರಿವಾಲ್ ತಮ್ಮ ಅಜ್ಞಾನವನ್ನು, ಮತ್ತು ನೆರೆಯ ದೇಶದೊಂದಿಗೆ ಹೊಂದಿರುವ ಸಂಕೀರ್ಣ ಇತಿಹಾಸ-ಸಂಬಂಧ ಮತ್ತು ವಿದೇಶಿ ನೀತಿಗಳ ಬಗ್ಗೆ ತಮ್ಮ ಅಲ್ಪ ತಿಳುವಳಿಕೆಯನ್ನು ತೋರಿಸಿಕೊಂಡಿದ್ದಾರೆ" ಎಂದು ಬಿಜೆಪಿ ಹಿರಿಯ ಮುಖಂಡ ಎಂ ಜೆ ಅಕ್ಬರ್ ಹೇಳಿದ್ದಾರೆ.
ಮಂಗಳವಾರ ಹಿಂದಿಯಲ್ಲಿ ಬರೆದ ಸರಣಿ ಟ್ವೀಟ್ ಗಳಲ್ಲಿ ಕೇಜ್ರಿವಾಲ್ ಅವರು "ಬಿಜೆಪಿ/ಆರ್ ಎಸ್ ಎಸ್ 'ಭಾರತ ಮಾತಾಕಿ ಜೈ' ಎಂಬ ಘೋಷಣೆ ಕೂಗಿದರೂ, ಐ ಎಸ್ ಐ ಆಹ್ವಾನಿಸಿ ಭಾರತಮಾತೆಯ ಬೆನ್ನಿಗೆ ಚೂರಿ ಹಾಕಿದ್ದಾರೆ" ಎಂದಿದ್ದರು.
ಜನವರಿಯಲ್ಲಿ ಪಂಜಾಬಿನ ಪಠಾನ್ ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರದಾಳಿಯ ತನಿಖೆ ನಡೆಸಲು ಐ ಎಸ್ ಐ ನ ಅಧಿಕಾರಿಯೂ ಸೇರಿದಂತೆ ಪಾಕಿಸ್ತಾನದ ಜಂಟಿ ತನಿಖಾ ದಳಕ್ಕೆ ಭಾರತ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ ಪಾಕಿಸ್ತಾನದ ವಿರುದ್ಧ ತಪ್ಪು ಪ್ರಚಾರ ನಡೆಸಲು ಭಾರತ ಹೂಡಿದ ಆಟ ಪಠಾನ್ ಕೋಟ್ ದಾಳಿ ಎಂದು ಜಂಟಿ ತನಿಖಾ ದಳ ಹೇಳಿದೆ ಎಂದು ತಿಳಿಯಲಾಗಿತ್ತು.
"ಇದು ನಾಚಿಕೆಗೇಡು. ಇದೇ ಮೊದಲ ಬಾರಿಗೆ ಪಾಕಿಸ್ತಾನದ ಮುಂದೆ ಪ್ರಧಾನಿ ದೇಶಕ್ಕೆ ಅವಮಾನ ಮಾಡಿದ್ದಾರೆ" ಎಂದು ಕೂಡ ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
Advertisement