ನವದೆಹಲಿ: ಇನ್ಕ್ರೆಡಿಬಲ್ ಇಂಡಿಯಾ ಪ್ರಚಾರ ಕಾರ್ಯಕ್ರಮದ ರಾಯಭಾರಿಯಾಗಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ನೇಮಕ ಮಾಡಲಾಗಿತ್ತಾದರೂ, ಇದೀಗ ನೇಮಕಾತಿಯ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
ಪನಾಮಾ ಕಂಪನಿಯಾದ ಮೊಸಾಕ್ ಫೋನ್ಸಿಕಾ ಮೂಲಕ ಕಪ್ಪು ಹಣ ಸಂಗ್ರಹಿಸಿದವರ ಪಟ್ಟಿ ಬಹಿರಂಗವಾಗಿದ್ದು, ಅದರಲ್ಲಿ ಬಚ್ಚನ್ ಹೆಸರಿರುವುದೇ ಈ ಅನಿಶ್ಚಿತತೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಪನಾಮಾ ಪೇಪರ್ಸ್ ಪಟ್ಟಿಯಲ್ಲಿ ಅಮಿತಾಬ್ ಹೆಸರಿರುವ ಕಾರಣ ಇನ್ಕ್ರೆಡಿಬಲ್ ಇಂಡಿಯಾ ಪ್ರಚಾರ ಕಾರ್ಯಕ್ರಮದ ರಾಯಭಾರಿ ನೇಮಕಾತಿ ಪ್ರಕ್ರಿಯೆ ವಿಳಂಬ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಬಂದಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಪನಾಮಾ ಪೇಪರ್ಸ್ ಮೂಲಕ ಬಹಿರಂಗವಾಗಿರುವ ಕಪ್ಪು ಹಣ ಹೊಂದಿರುವವರ ಪಟ್ಟಿಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಆದಾಗ್ಯೂ, ಇದರಲ್ಲಿ ಬಚ್ಚನ್ ಅವರ ಪಾತ್ರವೇನು? ಎಂಬುದರ ಬಗ್ಗೆ ವಿತ್ತ ಸಚಿವಾಲಯ ತನಿಖೆ ನಡೆಸುತ್ತಿದೆ.
ಸರ್ಕಾರದ ಮಹತ್ವದ ಪ್ರಚಾರ ಕಾರ್ಯಕ್ರಮವಾಗಿರುವ ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರಿಯಾಗಿದ್ದ ಶಾರುಖ್ ಖಾನ್ 'ಅಸಹಿಷ್ಣುತ'ೆ ವಿವಾದಕ್ಕೆ ಸಿಲುಕಿದ ನಂತರ ಆ ಸ್ಥಾನಕ್ಕೆ ಬಿಗ್ ಬಿ ಹೆಸರು ಸೂಚಿಸಲಾಗಿತ್ತು. ಇದೀಗ ಬಿಗ್ ಬಿ ಹೆಸರು ಪನಾಮಾ ಪೇಪರ್ಸ್ ಪಟ್ಟಿಯಲ್ಲಿರುವುದರಿಂದ ಪ್ರಸ್ತುತ ಪ್ರಚಾರ ಕಾರ್ಯಕ್ರಮದ ರಾಯಭಾರಿ ನೇಮಕಾತಿ ವಿಳಂಬವಾಗಲಿದೆ.