ಪ್ರಧಾನ ಸುದ್ದಿ
ಕೇಂದ್ರ ಸರ್ಕಾರಿ ನೌಕರರಿಗೆ ಎರಡು ವರ್ಷಗಳ ಬೋನಸ್ ಘೋಷಿಸಿದ ಜೇಟ್ಲಿ
ಕಳೆದ ಎರಡು ವರ್ಷಗಳಿಂದ ಬಾಕಿ ಇದ್ದ ಕೇಂದ್ರ ಸರ್ಕಾರಿ ನೌಕರರ ಬೋನಸ್ ನೀಡುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ...
ನವದೆಹಲಿ: ಕಳೆದ ಎರಡು ವರ್ಷಗಳಿಂದ ಬಾಕಿ ಇದ್ದ ಕೇಂದ್ರ ಸರ್ಕಾರಿ ನೌಕರರ ಬೋನಸ್ ನೀಡುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಘೊಷಿಸಿದ್ದಾರೆ.
ಸುಮಾರು 33 ಲಕ್ಷ ಕೇಂದ್ರ ಸರ್ಕಾರಿ ನೌಕರರ 2014-15 ಮತ್ತು 2015-16 ನೇ ಸಾಲಿನ ಬಾಕಿ ಬೋನಸ್ ಅನ್ನು ನೀಡಲಾಗುವುದು ಮತ್ತು 7 ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಹೆಚ್ಚುವರಿ ಬೋನಸ್ ದೊರೆಯಲಿದೆ ಎಂದು ಅರುಣ್ ಜೇಟ್ಲಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಗಳೊಂದಿಗೆ ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೇಟ್ಲಿ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಬೋನಸ್ ತಿದ್ದುಪಡಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಈ ವೇಳೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಇಂಧನ ಪಿಯುಶ್ ಗೋಯಲ್ ಸಹ ಹಾಜರಿದ್ದರು. ಈ ಮೂಲಕ ಸೆಪ್ಟೆಂಬರ್ 02ರ ದೇಶವ್ಯಾಪ್ತಿ ಮುಷ್ಕರದ ಬಿಸಿ ಶಮನಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಇದರ ಜೊತೆಗೆ ಅಸಂಘಟಿತ ವಲಯಗಳಾದ ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ, ಆಶಾ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ನೀಡುವ ಬಗ್ಗೆ ಸಮಿತಿ ಶೀಘ್ರದಲ್ಲೇ ನಿರ್ಧರಿಸಿ ತನ್ನ ವರದಿ ನೀಡಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.