ನವದೆಹಲಿ: ೧೯೮೪ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರಿಗೆ ಬುಧವಾರ ಇಲ್ಲಿನ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ನವೆಂಬರ್ ೧, ೧೯೮೪ ರಲ್ಲಿ ಝನಕಪುರಿ ಪ್ರದೇಶದಲ್ಲಿ ಗಲಭೆಗೆ ಪ್ರಚೋದಿಸಿ ಇಬ್ಬರು ಸಿಖ್ಖರು - ಸೋಹನ್ ಸಿಂಗ್ ಮತ್ತು ಅವರ ಪುತ್ರ ಅವತಾರ್ ಸಿಂಗ್ ಅವರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಸಜ್ಜನ್ ಕುಮಾರ್ ಅವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಕಾಸ್ ಧುಲ್ ನಿರೀಕ್ಷಣಾ ಜಾಮೀನು ನೀಡಿದ್ದಾರೆ.
ಇತ್ತೀಚೆಗಷ್ಟೇ ವಿಶೇಷ ತನಿಖಾ ದಳ ಈ ಪ್ರಕರಣದ ತನಿಖೆ ನಡೆಸಿತ್ತು.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಇಬ್ಬರು ಸಿಖ್ ಅಂಗರಕ್ಷಕರು ಕೊಂದ ನಂತರ ನಡೆದಿದ್ದ ಈ ಗಲಭೆಯಲ್ಲಿ, ಬಹುತೇಕ ದೆಹಲಿಯಲ್ಲಿಯೇ ೩೦೦೦ ಸಿಖ್ಖರನ್ನು ಹತ್ಯೆಗೈಯ್ಯಲಾಗಿತ್ತು.
ಸಜ್ಜನ್ ಕುಮಾರ್ ಒಳಗೊಂಡಂತೆ ಹಿರಿಯ ಕಾಂಗ್ರೆಸ್ ರಾಜಕಾರಿಣಿಗಳು, ಗಲಭೆ ಪ್ರಚೋದನೆ, ಗುಂಪುಗಳನ್ನು ಮುನ್ನಡೆಸಿ ಹಿಂಸೆಗೆ ಎಡೆ ಮಾಡಿಕೊಟ್ಟು ಸಿಖ್ಖರನ್ನು ಹತ್ಯೆ ಮಾಡಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.