ಶ್ರೀಲಂಕಾದಿಂದ ಮೀನುಗಾರರನ್ನು ಬಿಡುಗಡೆಗೊಳಿಸಿ ಕರೆತನ್ನಿ: ಜಯಲಲಿತಾ
ಚೆನ್ನೈ: ೧೦೪ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸೆರೆಹಿಡಿದಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ, ಮೀನುಗಾರರನ್ನು ಕೂಡಲೇ ಬಿಡುಗಡೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನರೇಂದ್ರ ಮೋದಿಯವರಿಗೆ ಅವರು ಮಂಗಳವಾರ ಬರೆದ ಪತ್ರದಲ್ಲಿ "ಕಳೆದ ೨೪ ಘಂಟೆಗಳಲ್ಲಿ ೨೦ ಜನ ಮೀನುಗಾರರನ್ನು ಸೆರೆ ಹಿಡಿದು ನಾಲ್ಕು ಮೀನು ಹಿಡಿಯುವ ಹಡಗುಗಳನ್ನು ಶ್ರೀಲಂಕಾ ವಶಪಡಿಸಿಕೊಂಡಿರುವ ನಡೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
"ಇದರೊಂದಿಗೆ ಈಗ ತಮಿಳುನಾಡಿನ ೧೦೪ ಜನ ಮೀನುಗಾರರು ಶ್ರೀಲಂಕಾದ ಸೆರೆಮನೆಯಲ್ಲಿದ್ದಾರೆ.
"ಈ ಮೀನುಗಾರರು ಶ್ರೀಲಂಕಾದ ಸೆರೆಮನೆಯಲ್ಲಿ ವಾರಗಟ್ಟಲೆ ಇರುವುದು ಮತ್ತು ಹಬ್ಬದ ದಿನಗಳಲ್ಲಿ ತಮ್ಮ ಕುಟುಂಬಗಳ ಜೊತೆ ಸಮಯ ಕಳೆಯಲು ಸಾಧ್ಯವಾಗದೆ ಇರುವುದು ದುರದೃಷ್ಟಕರ" ಎಂದು ಕೂಡ ಜಯಲಲಿತಾ ಹೇಳಿದ್ದಾರೆ.
ಇದಲ್ಲದೆ ಒಟ್ಟು ೬೬ ಮೀನುಗಾರಾರ ಹಡಗುಗಳು ಶ್ರೀಲಂಕಾದ ವಶದಲ್ಲಿವೆ ಎಂದು ಕೂಡ ಅವರು ಹೇಳಿದ್ದಾರೆ.
ಈ ಕೂಡಲೇ ೧೦೪ ಜನ ಮೀನುಗಾರರನ್ನು ಬಿಡುಗಡೆ ಮಾಡಲು ಹಾಗು ೬೬ ಹಡಗುಗಳನ್ನು ಹಿಂದಿರುಗಿಸಲು ಮೋದಿ ಮಧ್ಯ ಪ್ರವೇಶಿಸಿ ಕೊಲೊಂಬೋ ಜತೆಗೆ ಉನ್ನತ ಮಟ್ಟದ ಮಾತುಕತೆ ನಡೆಸಬೇಕೆಂದು ಕೂಡ ಜಯಲಲಿತಾ ಆಗ್ರಹಿಸಿದ್ದಾರೆ.