ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ ಎನ್ ಸಾಯಿಬಾಬಾ ಅವರ ಬಂಧನವನ್ನು ಪ್ರಶ್ನಿಸಿ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದ ಲೇಖಕಿ ಅರುಂಧತಿ ರಾಯ್ ಅವರಿಗೆ ಬಾಂಬೆ ಹೈಕೋರ್ಟ್ ನೀಡಿರುವ ನ್ಯಾಯಂಗ ನಿಂದನೆ ಕ್ರಿಮಿನಲ್ ನೋಟಿಸ್ ಗೆ ತಡೆ ನೀಡಲು ಶುಕ್ರವಾರ ಸುಪ್ರೀಮ್ ಕೋರ್ಟ್ ನಿರಾಕರಿಸಿದೆ.
ಜನವರಿ ೨೫ ರಂದು ನಾಗಪುರ ಪೀಠದ ಏಕ ಸದಸ್ಯ ನ್ಯಾಯಾಧೀಶರ ಮುಂದೆ ವೈಯಕ್ತಿಕವಾಗಿ ಹಾಜರಾಗುವುದರಿಂದ ಕೋರಿದ್ದ ವಿನಾಯಿತಿಗೂ ಸುಪ್ರೀಮ್ ಕೋರ್ಟ್ ನಿರಾಕರಿಸಿದೆ.
ಅಂದು ಕೋರ್ಟ್ ಮುಂದೆ ಹಾಜರಾಗುವಂತೆ ರಾಯ್ ಅವರಿಗೆ ತಿಳಿಸಿದ ಸುಪ್ರೀಮ್ ಕೋರ್ಟ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. "ಕೋರ್ಟ್ ಮುಂದೆ ಹಾಜರಾಗುವುದಕ್ಕೆ ನೀವು ಭಯ ಪಡುವುದು ಬೇಡ. ನೀವು ಹಾಜರಾಗಿ. ನಾವಿಲ್ಲಿದ್ದೀವಿ. ನಾವು ಎಲ್ಲವನ್ನು ಪರಿಗಣಿಸಿಯೇ ಈ ತೀರ್ಮಾನಕ್ಕೆ ಬಂದಿದ್ದೇವೆ" ಎಂದು ವಿಭಾಗೀಯ ಪೀಠ ರಾಯ್ ಅವರ ಪರವಾಗಿ ವಕಾಲತ್ತು ನಡೆಸಿದ ಚಂದರ್ ಉದಯ್ ಸಿಂಗ್ ಅವರಿಗೆ ತಿಳಿಸಿದೆ.
ಕನಿಷ್ಠ ಪಕ್ಷ ಅರುಂಧತಿ ರಾಯ್ ಅವರು ಖುದ್ದಾಗಿ ಪೀಠದ ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡಲು ಕೋರಿದ್ದ ಮನವಿಗೂ ಸುಪ್ರೀಂ ಕೋರ್ಟ್ ಸಾಧ್ಯವಿಲ್ಲ ಎಂದಿದೆ.
Advertisement