ನವದೆಹಲಿ: 67ನೇ ಗಣರಾಜ್ಯೋತ್ಸವ ದಿನದಂದು ಗಡಿ ಪ್ರದೇಶದಲ್ಲಿ ವಾಯುಪಡೆ ವಿಮಾನಗಳು ಹೊಡೆದುರುಳಿಸಿದ ಬಲೂನ್ ಪಾಕಿಸ್ತಾನದಿಂದ ಬಂದದ್ದು ಎಂದು ಬುಧವಾರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ನಿನ್ನೆ ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯುತ್ತಿದ್ದ ಸಂದರ್ಭದಲ್ಲೇ ರಾಜಸ್ಥಾನದ ಬರ್ಮರ್ ಜಿಲ್ಲೆಯಲ್ಲಿ ಆಕಾಶದಲ್ಲಿ ಬಲೂನಿನಾಕಾರದ ವಸ್ತು ಒಂದು ಹಾರಾಡುತ್ತಿರುವುದು ರೆಡಾರ್ನಲ್ಲಿ ಕಾಣಿಸಿಕೊಂಡಿದೆ. ದೇಶಾದ್ಯಂತ ಹೈ ಅಲರ್ಟ್ ಘೊಷಿಸಿದ್ದ ಕಾರಣ ವಿಮಾನಗಳು ಆ ಬಲೂನ್ ನನ್ನು ಹೊಡೆದುರುಳಿಸಿದ್ದವು.
ಇದು 30ಎಂಎಂ ಜಿಎಸ್ಎಚ್-301 ಆಟೋ ಫಿರಂಗಿಯಿಂದ ಬಂದ ಬಲೂನ್ ಎಂದು ನಂಬಲಾಗಿದ್ದು, ಭಾರತದ ಪ್ರತಿಕ್ರಿಯೆಯನ್ನು ಪರೀಕ್ಷಿಸಲು ನೆರೆಯ ಪಾಕಿಸ್ತಾನ ಇದನ್ನು ಹಾರಿ ಬಿಟ್ಟಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಪತಿಕ್ರಿಯಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು, ಭಾರತೀಯ ವಾಯುಗಡಿಯನ್ನು ಪ್ರವೇಶಿಸುತ್ತಿದ್ದ ಹಾರುವ ವಸ್ತುವೊಂದನ್ನು ಯುದ್ಧ ವಿಮಾನಗಳು ಹೊಡೆದುರುಳಿಸಿವೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
ಮೂಲಗಳ ಪ್ರಕಾರ, ಮೂರು ಮೀಟರ್ ಉದ್ದದ ಬಲೂನ್ ಮೇಲೆ ಹ್ಯಾಪಿ ಬರ್ಥ್ ಡೇ ಎಂಬ ಸಂದೇಶ ಇತ್ತು. ಈ ಕುರಿತು ರಕ್ಷಣಾ ಸಚಿವಾಲಯ ವಿದೇಶಾಂಗ ಸಚಿವಾಲಯದ ಜೊತೆ ಚರ್ಚಿಸುವ ಸಾಧ್ಯತೆ ಇದೆ.
ಇನ್ನು ಬಲೂನ್ ನಲ್ಲಿ ಯಾವುದೇ ಸ್ಪೋಟಕಗಳಿರಲಿಲ್ಲ ಮತ್ತು ಅಪಾಯಕಾರಿ ವಸ್ತುಗಳಿರಲಿಲ್ಲ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.